ಕೇಂದ್ರ ಬಿಜೆಪಿ ಸರಕಾರದ ರೈತ, ಕಾರ್ಮಿಕರ ವಿರೋಧಿ ನೀತಿಗಳು, ಹಕ್ಕು ಮತ್ತು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಟ್ರೆಂಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿ ಎದರು ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ್ ಶೈಲೇಶ್ ಎಸ್ ಪರಮಾನಂದ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಕೇಂದ್ರ ಸರಕಾರ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ ರೂ.15.00 ಲಕ್ಷ ಜಮೆ ಮಾಡುವುದಾಗಿ ಹೇಳಿ ಈಗ ವಿಶ್ವಾಸ ದ್ರೋಹ ಬಗೆದಿದೆ. ಕಳೆದ 10 ವರ್ಷಗಳ ಆಡಳಿತ ಅವಧಿಯಲ್ಲಿ ಜನರ ಮೂಲಭೂತ ಸಮಸ್ಯೆಗೆ ಪರಿಹಾರ ರೂಪಿಸದೆ ಧರ್ಮ ಹಾಗೂ ಜಾತಿ ವ್ಯವಸ್ಥೆಯಲ್ಲಿಯೇ ಕಾಲಹರಣ ಮಾಡುತ್ತಾ, ಬೆಲೆ ಏರಿಕೆ, ನಿರುದ್ಯೋಗ, ಬಡತನ, ಹಸಿವಿನಂತಹ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಿ, ದೇಶದ ಸಂಪತ್ತನ್ನು ಕಾರ್ಪೋರೇಟ್ ಗಳ ಲಾಭಕ್ಕೆ ಅನುಕೂಲವಾಗುವಂತಹ ನೀತಿಗಳನ್ನು ರೂಪಿಸುತ್ತಿದ್ದಾರೆಂದು ದೂರಿದರು.
ಈ ಹಿಂದೆ 1936ರ ಭವಿಷ್ಯ ನಿಧಿ, 1951ರ ಕಾರ್ಮಿಕ ಕಾಯ್ದೆ, 1956ರ ಕನಿಷ್ಠ ವೇತನ ಕಾಯ್ದೆ 1948ರ ವೇತನ ಪಾವತಿ ಕಾಯ್ದೆ, ಆರೋಗ್ಯ, ವಿಮೆಗಳಂತಹ ಕಾರ್ಮಿಕ ಪರವಾದ ಕಾನೂನುಗಳನ್ನು ಹತ್ತಿಕ್ಕಲಾಗುತ್ತಿದೆ. ದೇಶದ ರೈತಾಪಿ ವರ್ಗಕ್ಕೆ ಪೂರಕವಾದ ನೀತಿ ರೂಪಿಸದೆ ಮಾರಕ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ರೈತ ಹಾಗೂ ಕಾರ್ಮಿಕ ಪರ ನೀತಿಗಳ ಜಾರಿ ಹಾಗೂ ರೈತರ ರಕ್ಷಣೆ ಮಾಡುವಂತೆ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಮಾಡಬೇಕು. ರೈತರ ಮೇಲೆ ಹಾಕಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಮಂಜುನಾಥ್ಗೌಡ, ಪುಟ್ಟಸ್ವಾಮಿ, ಸಮಿತಿ ಮುಖಂಡರಾದ ಶೇಖರ್, ನಾಗೇಶ್, ಶಂಕರ್, ಸಂದೀಪ್, ಶಿವಪ್ಪ, ಜಾನಕಿ, ವಿಠಲ್, ರಮೇಶ್, ಎಸ್.ವಿಜಯ್, ಪ್ರಸಾದ್ ಮತ್ತಿತರರಿದ್ದರು.