ಮೂಡಿಗೆರೆ ಮೆಸ್ಕಾಂ ಇಂಜಿನಿಯರ್ ಒಬ್ಬರು ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೂಡಿಗೆರೆ ತಾಲ್ಲೂಕು ದಾರದಹಳ್ಳಿ ಮೆಸ್ಕಾಂ ಉಪವಿಭಾಗದ ಕಿರಿಯ ಇಂಜಿನಿಯರ್ (ಜೆ.ಇ.) ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.
ವಿದ್ಯುತ್ ಸಂಪರ್ಕ ಕಾಮಗಾರಿಯೊಂದಕ್ಕೆ ಅನುಮೋದನೆ ನೀಡಲು ಮಂಜುನಾಥ್ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ವಿದ್ಯುತ್ ಗುತ್ತಿಗೆದಾರರಾದ ಉಮೇಶ್ ಮತ್ತು ಕೆ. ಸತೀಶ್ ಅವರಿಂದ 15 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಮೂಡಿಗೆರೆ ಮೆಸ್ಕಾಂ ಕಛೇರಿಯಲ್ಲಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿ ಅನಿಲ್ ರಾಥೋಡ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸದರಿ ಮಂಜುನಾಥ್ ದಾರದಹಳ್ಳಿ ಮೆಸ್ಕಾಂ ಘಟಕದಲ್ಲಿ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತನ ಮೇಲೆ ಸಾರ್ವಜನಿಕರು ಮತ್ತು ವಿದ್ಯುತ್ ಗುತ್ತಿಗೆದಾರರ ವಲಯದಲ್ಲಿ ಹಲವು ಆರೋಪಗಳು ಕೇಳಿಬಂದಿದೆ.
ಪ್ರತಿಯೊಂದು ಕಾಮಗಾರಿಯ ಕಡತಗಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದ. ಕೆಲವೊಂದು ಕಾಮಗಾರಿಗಳನ್ನು ಗುತ್ತಿಗೆದಾರರನ್ನು ಬಿಟ್ಟು ತಾನೇ ನೇರವಾಗಿ ವಹಿಸಿಕೊಂಡು ಗ್ರಾಹಕರಿಂದ ಅಧಿಕ ಹಣ ಪಡೆಯುತ್ತಿದ್ದ. ಸರ್ಕಾರಿ ಕಾಮಗಾರಿಗಳಿಗೆ ಬಂದಿದ್ದ ವಿದ್ಯುತ್ ಕಂಬ ಸೇರಿದಂತೆ ಇತರೆ ಉಪಕರಣಗಳನ್ನು ದುರ್ಬಳಕೆ ಮಾಡುತ್ತಿದ್ದ ಎಂಬ ದೂರುಗಳು ಕೇಳಿಬಂದಿವೆ.