ಭಾರತದ ಕೃಷಿ ಆರ್ಥಿಕತೆಯಲ್ಲಿ ಸಾಂಬಾರ ಪದಾರ್ಥಗಳು ನಿರ್ಣಾಯಕ ಪಾತ್ರ ವಹಿಸಿವೆ, ಭಾರತದಲ್ಲಿ ಬಹು ಹಿಂದಿನಿಂದಲೂ ಸಾಂಬಾರ ಬೆಳೆಗಳನ್ನು ರೈತರು ಪ್ರಮುಖ ಆರ್ಥಿಕ ಬೆಳೆಯಾಗಿ ಅಳವಡಿಸಿಕೊಂಡು ಬಂದಿದ್ದಾರೆ ಎಂದು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ ಮಾವಾರ್ಕರ್ ಹೇಳಿದರು.
ಅವರು ಮೂಡಿಗೆರೆ ಸಾಂಬಾರ ಮಂಡಳಿ ಮೂಡಿಗೆರೆ ಕ್ಷೇತ್ರ ಕಛೇರಿ ವತಿಯಿಂದ ತೋಟಗಾರಿಕಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುಗಂಧ ಉದ್ಯೋಗ್ ಮಂಥನ್, ಸಾಂಬಾರ ಬೆಳೆಗಳ ಸಾಗುವಳಿ, ಗುಣಮಟ್ಟ ಮತ್ತು ರಫ್ತು ವಿಚಾರವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಂಬಾರ ಪದಾರ್ಥಗಳ ಬೆಳೆಗೆ ನಮ್ಮ ದೇಶದ ಹವಾಗುಣಕ್ಕೆ ಪೂರಕವಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿನಿಂದಲೂ ಏಲಕ್ಕಿ, ಕಾಳುಮೆಣಸು, ಅರಿಸಿನ, ಲವಂಗ, ದಾಲ್ಚಿನ್ನಿ ಮುಂತಾದ ಸಾಂಬಾರ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ನಮ್ಮ ದೇಶದ ಸಾಂಬಾರ ಪದಾರ್ಥಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಸಾಂಬಾರ ಪದಾರ್ಥಗಳಿಗೆ ಉತ್ತಮ ಬೆಲೆ ಸಿಗಬೇಕು ಎಂದರೆ ಅದರ ಗುಣಮಟ್ಟ ನಿರ್ವಹಣೆ ಬಹುಮುಖ್ಯವಾಗಿದೆ. ರೈತರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದರು.
ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ. ಧನಂಜಯ ಸ್ವಾಮಿ ಗ್ರಾಮೀಣ ಆರ್ಥಿಕತೆಯಲ್ಲಿ ಸಾಂಬಾರ ಪದಾರ್ಥಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಸಕಲೇಶಪುರ ಹೊಂಕರಹಳ್ಳಿ ಗೀತಾ ಟ್ರೇಡರ್ಸ್ ನ ಧರ್ಮರಾಜು ಹೆಚ್.ಎಸ್. ಅವರು ಸಾಂಬಾರ ಪದಾರ್ಥಗಳ ಪೂರೈಕೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಐ ಸಿ ಆರ್ ಐ ವಿಜ್ಞಾನಿ ಡಾ. ಹರ್ಷ ಕೆ.ಎನ್. ಅವರು ಸಾಂಬಾರ ಪದಾರ್ಥಗಳ ಬೆಳೆಯಲ್ಲಿ ಸಾವಯವ ಪ್ರಮಾಣಪತ್ರ ವಿಚಾರವಾಗಿ ಮಾಹಿತಿ ನೀಡಿದರು.
ಆಹಾರ ಸುರಕ್ಷತೆ ಅಧಿಕಾರಿ ಸುರೇಶ್ ಕೆ.ಕೆ., ನಾಬಾರ್ಡ್ ಅಧಿಕಾರಿ ಕೆ.ಕೆ. ಪ್ರತಾಪ್, ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಡಾ. ಕಾಂತರಾಜು ವೈ, ಡಾ. ಸುಚಿತ್ರ ಕುಮಾರಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಸಕಲೇಶಪುರ ಸಾಂಬಾರ ಮಂಡಳಿ ಅಧಿಕಾರಿ ಕುಮಾರ್ ಎಸ್ ಸ್ವಾಗತಿಸಿದರು. ಸಾಂಬಾರ ಮಂಡಳಿ ಮೂಡಿಗೆರೆ ಕ್ಷೇತ್ರ ಕಛೇರಿ ಅಧಿಕಾರಿ ಶಶಿಧರನ್ ವಂದಿಸಿದರು.