ಭೂ ಸಮಸ್ಯೆಗಳ ಪರಿಹಾರ ಹಾಗೂ ಅಕ್ರಮ ಭೂ ಖಾತೆ ರದ್ಧತಿಗೆ ಆಗ್ರಹಿಸಿ ಭೂ ಸಂಘರ್ಷ ಸಮಿತಿ ವತಿಯಿಂದ ಫೆಬ್ರವರಿ 22 ಮತ್ತು 23ರಂದು ಎರಡು ದಿನ ಮೂಡಿಗೆರೆ ತಾಲೂಕು ಕಚೇರಿ ಎದುರು ಅಹೋರಾತ್ರಿ ಮಹಾ ಧರಣಿ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ. ರುದ್ರಯ್ಯ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ತಾಲೂಕಿನಲ್ಲಿ ನಿವೇಶನ ಮತ್ತು ಸ್ಮಶಾನಕ್ಕಾಗಿ ಜನರು ಭೂಮಿ ಕೇಳುತ್ತಿದ್ದಾರೆಂದರೆ ಇಲ್ಲಿವರೆಗೆ ಆಡಳಿತ ನಡೆಸಿದ ಮೂರು ಪಕ್ಷಕ್ಕೂ ನಾಚಿಕೆಯಾಗಬೇಕು. ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಹೊರ ಜಿಲ್ಲೆಯ ಪ್ರಭಾವಿಗಳು ಭೂಮಿ ಆಕ್ರಮಿಸಿಕೊಳ್ಳುತ್ತಿದ್ದಾರೆ ಹೊರತು, ಇಲ್ಲಿಯೇ ಹುಟ್ಟಿ ಬೆಳೆದ ದಲಿತರು, ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಭೂಮಿ ಮೇಲಿನ ಹಕ್ಕು ಸಿಗುತ್ತಿಲ್ಲ. ಕಳಸ ಹಾಗೂ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 6780 ಎಕರೆ ಭೂಮಿ ಒತ್ತುವರಿಯಾಗಿದೆ. ಅಕ್ರಮ ಭೂ ಮಂಜೂರಾತಿ ಅಕ್ರಮ ಬಯಲಿಗೆ ಬರುವಷ್ಟರಲ್ಲಿ ಎಸಿ ಅವರನ್ನು ವರ್ಗಾವಣೆ ಮಾಡಲಾಯಿತು. ಹಾಗಾದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಯಾರೆಂದು ಪ್ರಶ್ನಿಸಿದರು.
ತಲ ತಲಾಂತರದಿಂದ ಬದುಕು ಸಾಗಿಸುತ್ತಿರುವವರಿಗೆ ಭೂಮಿ ಇಲ್ಲ. ಇದನ್ನು ಹೀಗೆಯೇ ಬಿಟ್ಟರೆ ಈ ಪದ್ಧತಿ ಮುಂದುವರೆಯುತ್ತದೆ. ಹಾಗಾಗಿ ಇದಕ್ಕೆ ಮುಕ್ತಿ ಕಾಣಬೇಕು. ಮಲೆನಾಡಿನ ಭೂಮಿಗೆ ಭೂಮಿತಿ ಕಾಯಿದೆ ಜಾರಿಯಾಗಬೇಕು. ದಲಿತರ ಭೂಮಿ ನಾಶಪಡಿಸಿರುವ ಬಗ್ಗೆ ತನಿಖೆಯಾಗಬೇಕು. ಬಡವರಿಗೆ ನಿವೇಶನಕ್ಕಾಗಿ ಭೂಮಿ ಮೀಸಲಿರಿಸಬೇಕು. ಒತ್ತುವರಿ ಬಿಡಿಸಬೇಕು. ತಾಲೂಕಿನ 649 ಅಕ್ರಮ ಭೂ ಮಂಜೂರಾತಿ ತನಿಖೆ ಪೂರ್ಣಗೊಳಿಸಬೇಕು. ಇಂತಹ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು. ಮಹಾ ಧರಣಿ ಸಂದರ್ಭದಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಡಿಸಿ, ಎಸಿ, ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು. ಧರಣಿ ಬಗ್ಗೆ ತಾತ್ಸಾರ ಮಾಡಿದರೆ ಕಂದಾಯ ಸಚಿವರ ಮುಂದೆಯೇ ನಿಯೋಗ ತೆರಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಅವರು, ಭೂಮಿ ಇಲ್ಲದೇ ನರಕಯಾತನೆ ಪಡುತ್ತಿರುವ ಕಳಸ ಹಾಗೂ ಮೂಡಿಗೆರೆ ತಾಲೂಕಿನ ಎಲ್ಲಾ ಬಡಜನರು ಹಾಗೂ ಪ್ರಗತಿಪರ ಸಂಘಟನೆ ಮುಖಂಡರು ಧರಣಿಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷ ರಮೇಶ್ ಕೆಳಗೂರು, ಪ್ರಧಾನ ಕಾರ್ಯದರ್ಶಿ ಶಿವಪ್ರಸಾಧ್, ಭಾನುಪ್ರಕಾಶ್, ಹರಿಶ್ ಲಲಿಕೆ ಉಪಸ್ಥಿತರಿದ್ದರು.