October 5, 2024

ಮಲೆನಾಡು ಕರಾವಳಿ ಬಗ್ಗೆ ಕಾಳಜಿ ಇರುವ ರಾಜ್ಯ ಕಾಂಗ್ರೆಸ್ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಪಕ್ಷದಿಂದ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಟಿಕೆಟ್ ನೀಡುವಂತೆ ಮಲೆನಾಡು-ಕರಾವಳಿ ಜನಪರ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಅನಿಲ್‌ ಹೊಸಕೊಪ್ಪ ಆಗ್ರಹಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮಲೆನಾಡು ಕರಾವಳಿ ಜನಪರ ಒಕ್ಕೂಟವು ಕಳೆದ 15 ವರ್ಷಗಳಿಂದ ಮಲೆನಾಡಿನ ಹಲವಾರು ಸಮಸ್ಯೆಗಳ ಕುರಿತು ಹೋರಾಟ ರೂಪಿಸಿ ಸರ್ಕಾರದ ಗಮನ ಸೆಳೆಯುತ್ತಾ ಬಂದಿದೆ. ಆದರೆ, ನಮ್ಮ ಹೋರಾಟಗಳು ಸರ್ಕಾರದ ಕಿವಿಗೆ ಬೀಳದೆ ಇನ್ನೂ ನಮ್ಮ ಸಮಸ್ಯೆಗಳು ಹಾಗೆಯೇ ಉಳಿದಿವೆ. ಇದರಿಂದ ಸಂಸತ್‌ನಲ್ಲಿ ಮಲೆನಾಡು ಕರಾವಳಿ ಜನರ ನರೆ ಧ್ವನಿಯನ್ನು ಕಳೆದು ಕೊಂಡಿದ್ದೇವೆ. ಒಂದು ರೀತಿ ನಾವು ತಬ್ಬಲಿಗಳಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಮಲೆನಾಡು ಕರಾವಳಿಯ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿರುವ ಹಾಗೂ ಇಲ್ಲಿಯ ಸ್ಥಳೀಯ ಸಮಸ್ಯೆಗಳಿಗೆ ಹೋರಾಟ ನಡೆಸುತ್ತಿರುವ ಖ್ಯಾತ ವಕೀಲರಾದ ಹಾಗೂ ಪ್ರಸ್ತುತ ರಾಜ್ಯ ಕಾಂಗ್ರೆಸ್ ವಕ್ತಾರರೂ ಆಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಈ ಬಾರಿ ಅವರ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಸುಧೀರ್ ಕುಮಾರ್ ಮುರೋಳ್ಳಿ

ಸುಧೀರ್ ಕುಮಾರ್ ಮುರೊಳ್ಳಿ ಅವರು ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಬಹು ಪರಿಚಿತರು, ಬಹು ದೊಡ್ಡ ಯುವಕರ ಪಡೆಯನ್ನೇ ಹೊಂದಿದ್ದು, ಎದುರಾಳಿಗೆ ತಕ್ಕ ಉತ್ತರ ನೀಡಲು ಸಮರ್ಥರಿದ್ದಾರೆ. ಇವರನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸುವುದರಿಂದ ನಮ್ಮ ಸಮಸ್ಯೆಗಳ ಪರವಾಗಿ ಸಂಸತ್‌ನಲ್ಲಿ ಧ್ವನಿ ಮೊಳಗಲಿದೆ ಎಂದರು.

ಕಳೆದ ಹಲವಾರು ವರ್ಷಗಳಿಂದ ಮಲೆನಾಡು ಕರಾವಳಿ ಭಾಗದಲ್ಲಿ ಅರಣ್ಯ ವಾಸಿಗಳು ತಮ್ಮ ಹಕ್ಕಿಗಾಗಿ ಹಲವಾರು ಹೋರಾಟಗಳನ್ನು ಹಾಗೂ ಸಭೆಗಳನ್ನು ಮಾಡಿಕೊಂಡು ಬರುತ್ತಿದ್ದರೂ ಅಂದಿನ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಅವಧಿಯಲ್ಲಿ ತಂದಿರುವ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಇನ್ನೂ ಅರಣ್ಯವಾಸಿಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ. ಇಲ್ಲಿ ರಾಜ್ಯ ಸರ್ಕಾರದಷ್ಟೇ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೂ ಇದೆ. ಹಾಗಾಗಿ ನಮ್ಮ ನಮ್ಮ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ ಅವರಾಗಲಿ ಇಂದಿಗೂ ಸಂಸತ್ತಿನಲ್ಲಿ ಮಲೆನಾಡು ಕರಾವಳಿ ಜನರ ಬದುಕಿನ ಬಗ್ಗೆ ಒಂದೇ ಒಂದು ದಿನ ಚರ್ಚೆ ಮಾಡದೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಈ ಭಾಗದ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಜನ ನಿಮ್ಮನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿರೋದು ಈ ಭಾಗದ ಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು, ಆದರೆ ನಮ್ಮ ಸಂಸದರು ಇಷ್ಟು ವರ್ಷಗಳ ಕಾಲ ಕೋಮು ಹೇಳಿಕೆಗಳಿಗೆ ಪ್ರಸಿದ್ಧರಾಗಿದ್ದಾರೆಯೇ ಹೊರತು ಮಲೆನಾಡು ಕರಾವಳಿ ಭಾಗದ ಮುಖ್ಯ ಸಮಸ್ಯೆಯಾದ ಅರಣ್ಯವಾಸಿಗಳ ಬಗ್ಗೆ ಸಂಸತ್ತಿನಲ್ಲಿ ಚಕಾರವೇ ಎತ್ತದೆ, ಪ್ರತಿ ದಿನ ಹೊಸ ಹೊಸ ನಾಟಕಗಳನ್ನು ಜನರ ಮುಂದೆ ತಂದು ಈ ಭಾಗದ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಕಿಡಿಕಾರಿದರು.

ಈ ಭಾಗದ ಬಹು ಮುಖ್ಯವಾದ ಅರಣ್ಯ ಒತ್ತುವರಿ, ಅಡಿಕೆಗೆ ಹಳದಿ ರೋಗ, ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ಇವುಗಳ ಬಗ್ಗೆ ಕಾಳಜಿ ಬದ್ಧತೆ ಇಲ್ಲದ ಇವರುಗಳನ್ನು ಮೂರೂ-ನಾಲ್ಕು ಬಾರಿ ಮತ ಹಾಕಿ ಕಳುಹಿಸಿದ್ದು ನಮ್ಮ ದುರದೃಷ್ಟಕರ. ಶಿವಮೊಗ್ಗದಲ್ಲಿಯೂ ಶರಾವತಿ ಸಂತ್ರಸ್ತರ ಸಮಸ್ಯೆ ನೋಡಿ ಅಲ್ಲಿಯೂ ಯಾರು ಕೇಳುವವರಿಲ್ಲವಾಗಿದೆ. ರಾಜ್ಯಕ್ಕೆ ಬೆಳಕು ಕೊಟ್ಟ ಜನರ ಬದುಕು ಕತ್ತಲಾಗಿದೆ. ಇವೆಲ್ಲಾ ಕಾರಣಗಳಿಂದ ಕರಾವಳಿ ಮಲೆನಾಡು ಭಾಗದ ಸಮಗ್ರ ಅಧ್ಯಯನ ನಡೆಸಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಈ ಬಾರಿಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಸಂಚಾಲಕ ಪ್ರವೀಣ್ ತಗಡೂರು, ಲೋಕೇಶ್, ಅಭಿಷೇಕ್ ಸಂತೋಷ್, ಮನೋಜ್ ಶೆಟ್ಟಿ, ಮಂಜುನಾಥ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ