ಇತ್ತೀಚೆಗೆ ಸಾಗರ್ ಎಂಬುವರು ಪತ್ರಿಕೆಯಲ್ಲಿ ಹೇಳಿಕೆ ನೀಡಿ, ಮೂಡಿಗೆರೆ ತಾಲೂಕಿನ ತರುವೆ ಗ್ರಾ.ಪಂ. ಯಲ್ಲಿ ನರೇಗಾ ಯೋಜನೆಯಡಿ ನಡೆಸಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ತರುವೆ ಗ್ರಾ.ಪಂ. ಅಧ್ಯಕ್ಷ ಬಿ.ಎಂ.ಸತೀಶ್ ಹೇಳಿದರು.
ಗುರುವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ 7 ಕಾಮಗಾರಿ ಪೈಕಿ 2 ಕಾಮಗಾರಿಯಲ್ಲಿ ಅವ್ಯಹಾರ ನಡೆದಿದೆ ಎಂಬ ಆರೋಪ ಸುಳ್ಳು. ಕಾಮಗಾರಿ ಬಗ್ಗೆ ಫೋಟೊ ಅಪ್ಲೋಡ್ ಮಾಡುವಾಗ ಕಾಯಕಬಂದು ವ್ಯತ್ಯಾಸ ಮಾಡಿದ್ದಾರೆ. ಹಾಗಾಗಿ ಒಂಬುಡಮನ್ಸ್ ಅಧಿಕಾರಿಗಳು ತನಿಖೆ ನಡೆಸಿ ನಂತರ ದಂಡ ವಿಧಿಸಬೇಕೆಂದು ವರದಿ ನೀಡಿದ್ದಾರೆ. ಅವ್ಯವಹಾರವೇ ನಡೆದಿರದ ಮೇಲೆ ದಂಡ ಯಾಕೆ ಕಟ್ಟಬೇಕೆಂದು ಈ ಬಗ್ಗೆ ಜಿ.ಪಂ. ಸಿಇಒ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
2019ರಲ್ಲಿ ಆದ ಪ್ರವಾಹದಿಂದ ಅನೇಕ ಮಂದಿ ಮನೆ ಕಳೆದುಕೊಂಡಿದ್ದರು. ಆದರೆ ಹಿಂದೆ ಬಿಜೆಪಿ ಬೆಂಬಲಿತ ಆಡಳಿತದಲ್ಲಿದ್ದಾಗ ಸಾಗರ್ ಎಂಬುವರು ಅವರ ಮನೆಗೆ ಯಾವುದೇ ಹಾನಿಯಾಗದಿದ್ದರೂ ಫ್ಲಡ್ ಹಣವನ್ನು ಅಂದಿನ ಪಿಡಿಓ ಮೂಲಕ 5 ಲಕ್ಷ ರೂ ಮಂಜೂರು ಮಾಡಿಸಿಕೊಂಡಿದ್ದಾರೆ. ಅಲ್ಲದೇ ಜಾನುವಾರುಗಳಿಲ್ಲದಿದ್ದರೂ ಕೊಟ್ಟಿಗೆ ನಿರ್ಮಾಣಕ್ಕೆ 70 ಸಾವಿರ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಅಂದಿನ ಬಿಜೆಪಿ ಬೆಂಬಲಿತ ಸದಸ್ಯರು ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡದೇ ಅವರಿಗೆ ಬೇಕಾದವರಿಗೆ ಹಣ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಇದರಿಂದ ಜನ ಬೇಸತ್ತು ಕಳೆದ ಚುನಾವಣೆಯಲ್ಲಿ ತರುವೆ ಗ್ರಾ.ಪಂ.ಯ 5 ಸ್ಥಾನಗಳಿಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡಿದ್ದಾರೆಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಮಾತನಾಡಿ ರಾಜಕೀಯ ದುರುದ್ದೇಶ ಮತ್ತು ಪಿಡಿಒ ವರ್ಗಾವಣೆಯಿಂದಾಗಿ ತರುವೆ ಗ್ರಾ.ಪಂ. ಅಧ್ಯಕ್ಷರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಇದು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಪ್ರವಾಹ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿ ನಡೆಸಿರುವ ಹಗರಣದ ಬಗ್ಗೆ ಯಾಕೆ ಅವರು ತೋರಿಸಿಲ್ಲ ಎಂದು ಪ್ರಶ್ನಿಸಿದ ಅವರು, ಇದನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಸ್ವರೂಪ, ರಘು, ಸುಶೀಲ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಂಪತ್ ಬಿಳಗುಳ ಬಣಕಲ್ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿತರರಿದ್ದರು.