ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸಿಕೊಡುವಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಪೋಷಕರು ಶ್ರಮ ವಹಿಸಿದರೆ ಸಮಾಜದಲ್ಲಿ ಮಕ್ಕಳು ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಹಾಸ್ಯ ಕಲಾವಿದ ಮಂಜು ಪಾವಗಡ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ಎಂಇಎಸ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭವಿಷ್ಯದಲ್ಲಿ ಉತ್ತಮ ಹುದ್ದೆ ಅಲಂಕರಿಸಲು ಹಾಗೂ ಯಾವುದೇ ವ್ಯವಹಾರ ಮಾಡಬೇಕೆಂದರೆ ಶಿಕ್ಷಣ ಪಡೆದಾಗ ಮಾತ್ರ ಸಾಧ್ಯ. ವಿದ್ಯಾ ಸಂಸ್ಥೆಗಳು ಶಿಕ್ಷಣದ ಜತೆಗೆ ಶಾಲೆ ವಾರ್ಷಿಕೋತ್ಸವ ಆಚರಿಸುವುದರಿಂದ ವಿದ್ಯಾರ್ಥಿಗಳ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬಿಇಒ ಹೇಮಂತಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾವಮತ ಸಮಾಜವನ್ನು ಅವಲೋಕನ ಮಾಡಿದರೆ ಸಂಸ್ಕಾರ ಮಾಯವಾಗಿರುವುದು ಕಂಡು ಬರುತ್ತಿದೆ. ವಿದ್ಯಾವಂತರೆ ತಮ್ಮ ಪೋಷಕರನ್ನು ವೃದ್ಧಾಶ್ರಮಗಳಿಗೆ ಹಾಕುತ್ತಿರುವುದು ದುರಂತ. ಇದನ್ನು ಸರಿಪಡಿಸಲು ವಿದ್ಯಾ ಸಂಸ್ಥೆ ಹಾಗೂ ಪೋಷಕರಿಂದ ಸಾಧ್ಯವಿದೆ. ಕೋವಿಡ್ ಸಂದರ್ಭದಲ್ಲಿ ಶ್ರೀಮಂತಿಕೆಗೆ ಬೆಲೆ ಕಡಿಮೆಯಾಗಿ ಹೃದಯವಂತಿಕೆ ಕಲಿಯುವ ಪಾಠ ಕಲಿತಿರುವುದನ್ನು ಮರೆಯಬಾರದು. ಹೃದಯವಂತಿಕೆ ಪ್ರತಿಯೊಬ್ಬರಲ್ಲೂ ಮೂಡಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಇಎಸ್ ಶಾಲೆ ಪ್ರಾಂಶುಪಾಲೆ ಚಿಂತು ವಹಿಸಿದ್ದರು. ಹರೀಶ್ ಪಿಯು ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಮಾತನಾಡಿದರು. ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.