ಹಾಸನ ಜಿಲ್ಲೆ ಬೇಲೂರು ಪಟ್ಟಣದ ಹೊರವಲಯದಲ್ಲಿ ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಮನೆಯ ಗೋಡೆಗೆ ಗುಂಡು ಹಾರಿಸಿ, ಮನೆಯಲ್ಲಿದ್ದವರನ್ನು ಬೆದರಿಸಿ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾರೆ.
ರವಿ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಸಂಜೆ ವೇಳೆ ಮುಖಕ್ಕೆ ಕರ್ಚಿಫ್ ಹಾಕಿಕೊಂಡು ಬಂದ ಇಬ್ಬರು ದರೋಡೆಕೋರರು ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ರವಿ ಅವರ ಪತ್ನಿ ಹಾಗೂ ಅವರ ತಾಯಿಗೆ ಪಿಸ್ತೂಲ್ ತೋರಿಸಿದ್ದಾರೆ. ಮೈಮೇಲಿದ್ದ ಚಿನ್ನಾಭರಣ ನೀಡುವಂತೆ ಹೆದರಿಸಿದ್ದಾರೆ. ಈ ವೇಳೆ ಚಿನ್ನಾಭರಣ ನೀಡಲು ಹಿಂದೇಟು ಹಾಕಿದ್ದಕ್ಕೆ ಗೋಡೆಗೆ ಗುಂಡು ಹಾರಿಸಿದ್ದಾರೆ.
ಪಿಸ್ತೂಲ್ನಿಂದ ಗುಂಡು ಹಾರಿಸುತ್ತಿದ್ದಂತೆ ಹೆದರಿದ ಶೃತಿ ಹಾಗೂ ಚಂದ್ರಮ್ಮ ಮಕ್ಕಳನ್ನು ರೂಮಿಗೆ ಕಳಿಸಿದ್ದಾರೆ. ಬಳಿಕ ಒಂದು ಚಿನ್ನದ ತಾಳಿ, ಚಿನ್ನದ ಓಲೆ, ಎರಡು ಚಿನ್ನದ ಗುಂಡು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಪಿಸ್ತೂಲ್ ಶಬ್ಧ ಕೇಳಿ ಹೊರಗಡೆ ಇದ್ದ ರವಿ ಅವರು ಓಡಿ ಬಂದಿದ್ದಾರೆ. ಕಳ್ಳರನ್ನು ಹಿಡಿಯಲು ಮುಂದಾದ ವೇಳೆ ಮತ್ತೊಮ್ಮೆ ಗಾಳಿಯಲ್ಲಿ ಫೈಯರ್ ಮಾಡಿದ್ದಾರೆ.
ಕಳ್ಳರ ಓಡಾಟದ ದೃಶ್ಯವೆಲ್ಲ ಸಿಸಿಟಿಯಲ್ಲಿ ಸೆರೆಯಾಗಿದೆ. ಕಳ್ಳರು ಕನ್ನಡ ಭಾಷೆಯಲ್ಲೇ ಚಿನ್ನಾಭರಣ ನೀಡುವಂತೆ ಪಿಸ್ತೂಲ್ ತೋರಿಸಿ ಹೆದರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್.ಪಿ. ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.