ಚಿಕ್ಕಮಗಳೂರು ಕಾಫೀಮಂಡಳಿಯಲ್ಲಿ ಬುಧವಾರ ಸಭೆಯೊಂದನ್ನು ಆಯೋಜಿಸಲಾಗಿತ್ತು. ಇದಕ್ಕೆ ಕಾರಣ ಈ ವರ್ಷದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸ್ಥಳೀಯ ಖಾಸಗಿ ವ್ಯಾಪಾರಸ್ಥರು ಮತ್ತು ಕ್ಯೂರಿಂಗ್ ಮಾಲೀಕರು ಬೆಳೆಗಾರರಿಗೆ ದರ ನೀಡುತ್ತಿಲ್ಲ ಎಂಬ ಆರೋಪಗಳು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡತೊಡಗಿತ್ತು. ಇದನ್ನು ಗಮನಿಸಿದ ಆವತಿ ಹೋಬಳಿ ಕಾಫೀಬೆಳೆಗಾರರ ಸಂಘ ಕಾಫೀಮಂಡಳಿ ಅಧ್ಯಕ್ಷರನ್ನು ಸಂಪರ್ಕಿಸಿ ವಿಷಯವನ್ನು ಪ್ರಸ್ತಾಪಿಸಿತ್ತು. ತಕ್ಷಣ ಸ್ಪಂದಿಸಿದ ಕಾಫೀಮಂಡಳಿ ಅಧ್ಯಕ್ಷರಾದ ಎಂ. ಜೆ ದಿನೇಶ್ ರವರು ಕಾಫೀಮಂಡಳಿ ಉಪನಿರ್ದೇಶಕರಾದ ವೆಂಕಟರೆಡ್ಡಿಯವರೊಂದಿಗೆ ಚರ್ಚಿಸಿ ಸಭೆ ಆಯೋಜಿಸುವಂತೆ ಸೂಚಿಸಿದರು. ಅಧ್ಯಕ್ಷರು ಈ ಸಭೆಗೆ ಕೊಡಗಿನ “ಬಯೋಟ್” ಕಾಫಿ ಮಾಲೀಕರಾದ ಕೆ. ಕೆ ವಿಶ್ವನಾಥ್,” ಗೀತಾ ಕಾಫಿ ವರ್ಕ್ಸ್” ಮಾಲೀಕರಾದ ಧರ್ಮರಾಜ್ ಹೊಂಕರವಳ್ಳಿ, ಕೋಮಾರ್ಕ್ ಸಂಸ್ಥೆ ಅಧ್ಯಕ್ಷರಾದ ಅರೆಕುಡಿಗೆ ಶಿವಣ್ಣ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ. ಹೆಚ್. ಟಿ ಮೋಹನ್ ಕುಮಾರ್ ಇವರುಗಳನ್ನು ಮುಖ್ಯವಾಗಿ ಸಭೆಗೆ ಆಹ್ವಾನಿಸಿದ್ದರು.
ವಿಷಯ ಪ್ರಸ್ತಾಪಿಸಿ ಮಾತನಾಡಿದ ಅಧ್ಯಕ್ಷರಾದ ಎಂ. ಜೆ ದಿನೇಶ್ ರವರು ಮೊನ್ನೆ ದೆಹಲಿ ಭೇಟಿಯಲ್ಲಿ ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಸ್ ಗೊಯಲ್ ರವರೊಂದಿಗೆ ಚರ್ಚೆ ನೆಡೆಸಿದ್ದು, ಬೆಳೆಗಾರರ ಎಲ್ಲಾ ಸಮಸ್ಯೆಗಳನ್ನು ಸಚಿವರ ಮುಂದೆ ಇಟ್ಟಿರುವುದಾಗಿ ತಿಳಿಸಿದರು. ಮುಂದಿನ ಹತ್ತು ವರ್ಷಕ್ಕೆ ಕಾರ್ಯಯೋಜನೆಯೊಂದನ್ನು ಸಿದ್ದಪಡಿಸಿದ್ದು ಅದನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ಬೆಳೆಗಾರರಿಗೂ ಮುಂದಿನ ದಿನಗಳಲ್ಲಿ ರಿಯಾಯಿತಿ ದರದಲ್ಲಿ ಪೋರ್ಟಬಲ್ ಹಲ್ಲರ್ ಮಿಷನ್ ದೊರೆಯುವಂತೆ ಮಾಡಲಾಗುವುದು ಎಂದರು. ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಬೆಳೆಗಾರರಿಗೆ ಮಾರುಕಟ್ಟೆ ದರದ ಬಗ್ಗೆ ತಮ್ಮ ಪ್ರಶ್ನೆಗಳನ್ನು ಕೇಳುವಂತೆ ತಿಳಿಸಿದರು. ಇದರಲ್ಲಿ ಎ. ಕೆ ವಸಂತೇಗೌಡ,ಹೆಚ್. ಹೆಚ್ ದೇವರಾಜ್, ಶ್ರೀಮತಿ ರಾಧ ಸುಂದರೇಶ್,ಡಿ. ಎಸ್ ಮಂಜುನಾಥ್, ಹೆಚ್. ಎನ್. ಕೃಷ್ಣೆಗೌಡ, ಎ. ಎಂ ಸತೀಶ್, ಹೆಚ್. ಬಿ ಮಹೇಂದ್ರ ಸೇರಿದಂತೆ ಹಲವರು ಹತ್ತಾರು ಪ್ರಶ್ನೆ ಮಾಡಿದರು.
ಈ ಎಲ್ಲಾ ಪ್ರಶ್ನೆಗಳಿಗೆ ಅಂಕಿ, ಅಂಶ ಸಹಿತ ಸಮರ್ಪಕ ಉತ್ತರ ನೀಡದ ಕೆ. ಕೆ ವಿಶ್ವನಾಥ್ ರವರು ಸುದೀರ್ಘವಾಗಿ ವಿವರಿಸಿ ಬೆಳೆಗಾರರಲ್ಲಿದ್ದ ಅನುಮಾನವನ್ನು ಹೊಗಲಾಡಿಸಿದರು.ಕಾಫಿ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಯಾವುದೇ ಮೋಸ ಆಗುತ್ತಿಲ್ಲ, ಡಾಲರ್, ಪೌಂಡ್, ರೂಪಾಯಿ ಮೌಲ್ಯಕ್ಕೆ ಅನುಗುಣವಾಗಿ ನಮಗೆ ಬೆಲೆ ಸಿಗುತ್ತಿರುವುದನ್ನು ಖಾತ್ರಿಪಡಿಸಿದರು.
ನಂತರ ಮಾತನಾಡಿದ ಧರ್ಮರಾಜ್ ಹೊಂಕರವಳ್ಳಿ ಇಂತಹ ಸಭೆಯನ್ನು ನಾನು ಕೂಡ ಎದುರು ನೋಡುತಿದ್ದೆ, ನಮ್ಮ ಕಾಫೀಮಂಡಳಿ ಅಧ್ಯಕ್ಷರು ಬೆಳೆಗಾರರಿಗಾಗಿ ಉಪಯುಕ್ತ ಸಭೆ ಏರ್ಪಡಿಸಿದ್ದು, ಇಂತಹ ಸಭೆಗಳು ಕಾಫಿ ಬೆಳೆಯುವ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನೆಡೆಸುವಂತೆ ಸೂಚಿಸಿದರು. ಕಾಫಿ ಮಾರುಕಟ್ಟೆ ಬಗ್ಗೆ ವಾಟ್ಸಪ್ಪ್ ನಲ್ಲಿ ಬರುವ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸದೇ ಅದನ್ನು ಎಲ್ಲಾ ಗುಂಪುಗಳಿಗೆ ಶೇರ್ ಮಾಡಬೇಡಿ ಎಂದರು.ಕಾಫಿ ಎಂದೂ ನಶಿಷಿ ಹೋಗಲು ಸಾಧ್ಯವಿಲ್ಲ. ಆಸಕ್ತಿಯಿಂದ ಕಾಫಿ ಕೃಷಿಯಲ್ಲಿ ನಾವು ತೊಡಗಿಕೊಂಡು ನಮ್ಮ ಮಕ್ಕಳಿಗೂ ಕಾಫಿ ಕೃಷಿಯ ಬಗ್ಗೆ ಆತ್ಮವಿಶ್ವಾಸ ತೋರುವಂತೆ ಪ್ರೇರೆಪಿಸಿದರೆ ನಾವು ಕಾಫೀಯಲ್ಲಿ ನಷ್ಟ ಹೊಂದಲು ಸಾಧ್ಯವಿಲ್ಲ. ಇಂದು ಪ್ರಪಂಚದಲ್ಲಿ ಚಿನ್ನ, ಪೆಟ್ರೋಲಿಯಂ ಹೊರತುಪಡಿಸಿದರೆ ಕಾಫಿ ಜಗತ್ತಿನ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
ಬೆಳೆಗಾರರು ಕಾಫೀಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಮಗೆ ಉತ್ತಮ ಬೆಲೆ ಸಿಗಲು ಸಾಧ್ಯವೇ ಇಲ್ಲ ಎಂದರು.ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆ ದರಕ್ಕಿಂತ ಅಧಿಕ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದರು.ನಂತರ ಮಾತನಾಡಿದ ಕೋಮಾರ್ಕ್ ಅಧ್ಯಕ್ಷರು ನಮ್ಮದೇ ಸಂಸ್ಥೆ ಕೋಮಾರ್ಕ್ ನ್ನು ಬಲಪಡಿಸಬೇಕಿದೆ. ಬೆಳೆಗಾರರು ತಮ್ಮ ಕಾಫೀಯ ಶೇ 10%ಕಾಫೀಯನ್ನು ನಮಗೆ ನೀಡಿ, ಇದು ನಿಮ್ಮದೇ ಸಂಸ್ಥೆಯಾಗಿ ಉಳಿಯುತ್ತದೆ. ನಾವು ಯಾವುದೇ ವಿಚಾರವನ್ನು ಪ್ರಸ್ತಾಪಿಸುವಾಗ ನಮ್ಮಲ್ಲಿ ದಾಖಲೆ ಇಲ್ಲದೆ ಮಾತನಾಡಬಾರದು. ಅಂತೆ ಕಂತೆಗಳು, ಗಾಳಿ ಸುದ್ದಿಗಳಿಗೆ ಬೆಳೆಗಾರರು ಕಿವಿಕೊಡದೆ ತಮ್ಮ ಯಾವುದೇ ವಿಚಾರಗಳನ್ನು ಕಾಫೀಮಂಡಳಿ ಅಧ್ಯಕ್ಷರೊಂದಿಗೆ ನೇರವಾಗಿ ಚರ್ಚಿಸುವಂತೆ ಸಲಹೆ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟ ಅಧ್ಯಕ್ಷರಾದ ಮೋಹನ್ ಕುಮಾರ್ ಮಾತನಾಡಿ ಬೆಳೆಗಾರರ ಸಮಸ್ಯೆ ಬಗ್ಗೆ ನಿರಂತರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದೂ, ಈ ಬಾರಿಯ ಬಜೆಟ್ನಲ್ಲಿ ಬೆಳೆಗಾರರಿಗೆ ನೆರವು ಘೋಷಣೆಯಾಗುವ ಆಶಾಬಾವನೆ ವ್ಯಕ್ತಪಡಿಸಿದರು. ಸಭೆ ನೆಡೆಸಿಕೊಟ್ಟ ಕಾಫಿ ಮಂಡಳಿ ಅಧ್ಯಕ್ಷರಿಗೆ, ಸ್ಥಳವಕಾಶ ಮಾಡಿಕೊಟ್ಟ ಕಾಫಿ ಮಂಡಳಿಗೆ ಆವತಿ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಹೆಚ್. ಏನ್ ಶ್ರೀಧರ್ ಅಭಿನಂದನೆ ತಿಳಿಸಿದರು. ಸಭೆಯಲ್ಲಿ ಆವತಿ, ಖಾಂಡ್ಯ, ಕಸಬಾ, ವಸ್ತಾರೆ, ಆಲ್ದುರು, ಬಾಳೆಹೊನ್ನೂರು, ಮೂಡಿಗೆರೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಅನೇಕ ಬೆಳೆಗಾರರು ಕಾಫೀಮಂಡಳಿ ಅಧಿಕಾರಿವರ್ಗದವರು ಬಾಗವಹಿಸಿದ್ದರು.
✍️ಕೆರೆಮಕ್ಕಿಮಹೇಶ್, ಕಾರ್ಯದರ್ಶಿ ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘ (ರಿ )ಆವತಿ.