ಕಾಫಿನಾಡಿನಲ್ಲಿ ಉದ್ದಿಮೆದಾರರ ಸಂಖ್ಯೆ ಬಹು ವಿರಳವಾಗಿದೆ. ಯುವಕರು ಕೃಷಿಯೊಂದಿಗೆ ಉದ್ದಿಮೆಯೆಡೆಗೂ ಗಮನ ಹರಿಸಬೇಕು. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆ, ರಫ್ತು ವಲಯದಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಇದನ್ನು ಯುವಪೀಳಿಗೆ ಸದುಪಯೋಗಪಡಿಸಿಕೊಳ್ಳಬೇಕು. ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಮನೋಭಾವನೆ ಬೆಳಿಸಿಕೊಳ್ಳಬೇಕು. ಕಾಫಿ ವಲಯ ಅಭಿವೃದ್ಧಿ ಹೊಂದಬೇಕು ಎಂದರೆ ಬೆಳೆಗಾರರು, ಕಾರ್ಮಿಕರು ಮತ್ತು ಉದ್ದಿಮೆದಾರರ ನಡುವೆ ಸಮನ್ವಯತೆ ಬಹುಮುಖ್ಯ ಎಂದು ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಬೀಜುವಳ್ಳಿ ಮಾನ್ಸಿ ಎನ್ ಕ್ಲೇವ್ ಲೇಯೌಟ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುದ್ರೆಮನೆ ಕಾಫಿ ಕ್ಯೂರರ್ಸ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಭಾರತವು ಕಾಫಿ ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ತೋರುತ್ತಿದೆ. ಭಾರತದ ಪಶ್ಚಿಮಘಟ್ಟ ಪ್ರದೇಶದಲ್ಲಿ ನೆರಳಿನಾಶ್ರಯದಲ್ಲಿ ಬೆಳೆಯುತ್ತಿರುವ ಕಾಫಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಯುರೋಪಿನ ಅನೇಕ ದೇಶಗಳಲ್ಲಿ ನೆರಳಿನ ಆಶ್ರಯದಲ್ಲಿ ಬೆಳೆಯದ ಕಾಫಿಯನ್ನು ನಿಷೇಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿವೆ. ಇದರಿಂದ ಭಾರತದ ಕಾಫಿಗೆ ಭವಿಷ್ಯದಲ್ಲಿ ಇನ್ನಷ್ಟು ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದರು.
ಕಾಫಿ ಮಂಡಳಿ ವತಿಯಿಂದ ಮುಂದಿನ 10 ವರ್ಷಗಳಲ್ಲಿ ಉದ್ದಿಮೆ ಸಾಗಬೇಕಾದ ಮೈಲಿಗಲ್ಲುಗಳ ಬಗ್ಗೆ ವಿಸ್ತೃತ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ವಾಣಿಜ್ಯ ಸಚಿವರು ಕಾಫಿ ಮಂಡಳಿ ನೀಡಿರುವ ಪ್ರಸ್ತಾವನೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದಿಂದ ಕಾಫಿ ಉದ್ದಿಮೆಗೆ ಹೆಚ್ಚಿನ ಪ್ರೋತ್ಸಾಹ ಭರವಸೆ ನೀಡಿದ್ದಾರೆ ಎಂದರು.
ವಾಸ್ತು ತಜ್ಞರಾದ ಎಸ್.ಕೆ. ಶಿವರಾಂ ರವರು ಮಾತನಾಡಿ ; ಭಾರತೀಯ ಪ್ರಾಚೀನ ವಾಸ್ತುಶಾಸ್ತ್ರ ನಮ್ಮ ಋಷಿಮುನಿಗಳ ಅಪಾರ ಜ್ಞಾನದ ಮೇಲೆ ರೂಪಿತವಾಗಿವೆ. ವಾಸ್ತಶಾಸ್ತ್ರದ ಬಗ್ಗೆ ನಮ್ಮ ವೇದಗಳಲ್ಲಿಯೂ ಪ್ರಸ್ತಾವನೆ ಇದೆ. ಮಾನವ ಪ್ರಕೃತಿಯ ಜೊತೆ ಸಹಜವಾಗಿ ಬದುಕಿದಾಗ ಅತ್ಯಂತ ಶ್ರೇಷ್ಟವಾದ ನಡವಳಿಕೆಯಾಗಿದೆ. ಪ್ರಕೃತಿಯ ಮಡಿಲಿನಲ್ಲಿ ಇರುವವನೇ ನಿಜವಾದ ಯೋಗಿ ಎಂದರು.
ಮುದ್ರಮನೆ ಕಾಫಿ ಕ್ಯೂರರ್ಸ್ ಮತ್ತು ಮಾನ್ಸಿ ಎಕ್ಲೇವ್ ಮಾಲೀಕ ಬಿ.ಎಸ್.ಸಂತೋಷ್ ಮಾತನಾಡಿ ; ಮುದ್ರೆಮನೆ ಸಂಸ್ಥೆಯು ಕಾಫಿ ಸಂಸ್ಕರಣೆ ಜೊತೆಗೆ ಇದೀಗ ವಸತಿ ಸಮುಚ್ಚಯ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಮಲೆನಾಡಿನಲ್ಲಿ ಅತ್ಯುನ್ನತ ಗುಣಮಟ್ಟದ ಮತ್ತು ಮಾನವನ ಮೂಲಭೂತ ಸೌಲಭ್ಯಗಳನ್ನು ಪೂರೈಸುವಂತೆ ಯೋಜನಾಬದ್ಧವಾದ ವಸತಿ ಸಮುಚ್ಚಯವನ್ನು ರೂಪಿಸಬೇಕೆಂಬ ಕನಸಿನೊಂದಿಗೆ ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಪ್ರಾರಂಭಿಸಿರುವ ಮಾನ್ಸಿ ಎನ್ ಕ್ಲೇವ್ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯವನ್ನು ಸಮುಚ್ಚಯದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕಿ ಶ್ರೀಮತಿ ನಯನ ಮೋಟಮ್ಮ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು ಕಸ್ತೂರಿಬಾ ಸದನದ ಕಾರ್ಯದರ್ಶಿ ಶ್ರೀಮತಿ ಮೋಹಿನಿ ಸಿದ್ದೇಗೌಡ ಉಪಸ್ಥಿತರಿದ್ದರು.