ಮೋದಿಯವರ ಅಭಿಮಾನಿ ಮತ್ತು ಬಿ.ಜೆ.ಪಿ. ಯುವಮುಖಂಡರೋರ್ವರು ತಮ್ಮ ತಂಗಿಯ ಮದುವೆಯ ಅಮಂತ್ರಣ ಪತ್ರಿಕೆಯನ್ನು ಮೋದಿ ಪರ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಮದುವೆಯಲ್ಲಿ ವಧುವರರಿಗೆ ಉಡುಗೊರೆ ಕೊಡಬೇಕೆನಿಸಿದರೆ ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಮತನೀಡಿ ಎಂದು ಮನವಿ ಮಾಡಿದ್ದಾರೆ.
ಹೌದು, ಇಂತಹುದೊಂದು ಅಪರೂಪದ ಮದುವೆ ಆಮಂತ್ರಣ ಪತ್ರಿಕೆ ಮಾಡಿಸಿರುವವರು ಚಿಕ್ಕಮಗಳೂರು ಜಿಲ್ಲಾ ಬಿ.ಜೆ.ಪಿ. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿ ಸನಾತನಿ.
ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ಶಶಿ ಅವರ ಸಹೋದರಿ ವಕೀಲೆ ಸಹನಾ ಅವರ ವಿವಾಹ ಹುಣಸೂರಿನ ಸಚ್ಚಿನ್ ಎಂಬುವವರೊಂದಿಗೆ ಚಿಕ್ಕಮಗಳೂರು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 5 ರಂದು ಏರ್ಪಡಿಸಲಾಗಿದೆ.
ಈ ವಿವಾಹಕ್ಕೆ ಶಶಿ ಅವರು ತಮ್ಮ ಬಂಧುಗಳು ಮತ್ತು ಸ್ನೇಹಿತರಿಗೆ ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತವನ್ನು ಕೇಳಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ “ವಧು ವರರಿಗೆ ಉಡುಗೊರೆ ನೀಡಬೇಕೆಂದಿದ್ದರೆ ಖಂಡಿತವಾಗಿಯೂ ಈ ಬಾರಿ ನರೇಂದ್ರ ಮೋದಿಯವರಿಗೆ ಮತ ನೀಡಿ, ಏಕೆಂದರೆ ಅವರ ಮಕ್ಕಳ ಭವಿಷ್ಯದ ಭಾರತ ಸುಭದ್ರವಾಗಿರಬೇಕು” ಎಂದು ಬರೆದುಕೊಂಡಿದ್ದಾರೆ.
ಇದೀಗ ಈ ಆಹ್ವಾನ ಪತ್ರಿಕೆ ಎಲ್ಲೆಡೆ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿಯೂ ಸಹ ಈ ಆಹ್ವಾನ ಪತ್ರಿಕೆ ಗಮನ ಸೆಳೆದಿದೆ.