ಸರ್ಕಾರದ ಉಚಿತ ಪಡಿತರ ಪಡೆಯಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರು ಪಡಿತರ ಪಡೆಯಲು ರೇಷನ್ ಅಂಗಡಿಗೆ ಹೋದರೆ ಅಲ್ಲಿ ಸರ್ವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ತೆಲೆದೋರಿದ್ದು, ಐದು ಹತ್ತು ಕೇಜಿ ಅಕ್ಕಿ ಪಡೆಯಲು ದಿನಗಟ್ಟಲೇ ಕೆಲಸ ಬಿಟ್ಟು ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇಂದು ಗ್ರಾಮೀಣ ಪ್ರದೇಶ ಅಥವಾ ಪಟ್ಟಣ ಪ್ರದೇಶ ಯಾವುದೇ ಪಡಿತರ ವಿತರಣ ಕೇಂದ್ರಗಳಿಗೆ ಭೇಟಿ ನೀಡಿದರೆ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಬೆಳಗ್ಗೆಯಿಂದ ಸಂಜೆ ವರೆಗೂ ರೇಷನ್ ಅಂಗಡಿ ಬಾಗಿಲು ಕಾದರೂ ಪಡಿತರ ಸಿಗದೇ ಹಾಗೇ ಮನೆಗೆ ಮರಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದು ಒಂದು ಎರಡು ಕಡೆಗಳ ದೃಶ್ಯವಲ್ಲ. ರಾಜ್ಯದ ಯಾವುದೇ ಮೂಲೆಗೆ ಹೋದರೂ ಇಂತಹುದೇ ಸಮಸ್ಯೆ ಎದುರಾಗಿದೆ. ಆಹಾರ ಸರಬರಾಜು ಇಲಾಖೆಯ ವೆಬ್ ಸೈಟ್ ಸಮಸ್ಯೆಯೋ, ಸರ್ವರ್ ಸಮಸ್ಯೆಯೋ, ನೆಟ್ವರ್ಕ್ ಸಮಸ್ಯೆಯೋ ಒಂದಲ್ಲ ಒಂದು ಸಮಸ್ಯೆ ಪಡಿತರ ಪಡೆಯಲು ಹೋಗುವವರಿಗೆ ಕಾಡುತ್ತಿದೆ.
ಕಳೆದ ಮೂರು ದಿನಗಳಿಂದ ಎಲ್ಲಾ ಕಡೆ ಪಡಿತರ ಸರಬರಾಜು ಸರ್ವರ್ ಡೌನ್ ಆಗಿದ್ದು ಎಲ್ಲಿಯೂ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬಡವರು ದಿನನಿತ್ಯ ದುಡಿದು ತಿನ್ನುವವರು ತಮ್ಮ ಕೆಲಸ ಬಿಟ್ಟು ರೇಷನ್ ಅಂಗಡಿ ಬಾಗಿಲು ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಪಡಿತರ ವಿತರಣೆ ಮಾಡುವ ಸಿಬ್ಬಂದಿಗಳಿಗೂ ತೀವ್ರ ಕಿರಿಕಿರಿಯಾಗುತ್ತಿದೆ. ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿದರೆ ಅವರು ಅದು ಸ್ಟೇಟ್ ಲೆವೆಲ್ ಇಶ್ಯೂ ಎಂದು ಹೇಳುತ್ತಾರೆ. ಇದೆಲ್ಲದರ ನಡುವೆ ತೊಂದರೆಗೆ ಸಿಲುಕಿರುವವರು ಜನರು.
ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿ ಸರ್ವರ್ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಜರುಗಿಸಬೇಕು. ವೆಬ್ ಸೈಟ್ ಗಳನ್ನು ಮೇಲ್ದರ್ಜೆಗೇರಿಸಿ ಜನರಿಗೆ ತೊಂದರೆ ಆಗದಂತೆ ಸೂಕ್ತ ಮಾರ್ಪಾಟು ಮಾಡಬೇಕು.