ಸೌದೆ ಹೊತ್ತು ತರುವಾಗ ಭದ್ರಾ ನದಿಯಲ್ಲಿ ಕಾಲುಜಾರಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಕಳಸ ತಾಲ್ಲೂಕಿನಲ್ಲಿ ನಡೆದಿದೆ. ಕಳಸ ತಾಲ್ಲೂಕಿನ ಕುದುರೆಮುಖ ಸಮೀಪದ ನೆಲ್ಲಿಬೀಡು್ ಗ್ರಾಮದ ಪೃಥ್ವಿರಾಜ್ (17 ವರ್ಷ) ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಯುವಕ.
ಇಂದು ಶುಕ್ರವಾರ ಮಧ್ಯಾಹ್ನ ತನ್ನ ಸಹೋದರ ಸಂಬಂಧಿಯೊಂದಿಗೆ ಸೌದೆ ತರಲೆಂದು ನೆಲ್ಲಿಬೀಡು ಗ್ರಾಮದಲ್ಲಿ ಹರಿಯುತ್ತಿರುವ ಭದ್ರಾ ನದಿಯನ್ನು ದಾಟಿ ಆಚೆ ಹೋಗಿದ್ದು, ಸೌದೆಯನ್ನು ಹೊತ್ತು ವಾಪಾಸ್ಸು ನದಿದಾಟಿ ಬರುವಾಗ ಪೃಥ್ವಿರಾಜ್ ಕಾಲು ಜಾರಿ ಬಿದ್ದಿದ್ದು, ಪಕ್ಕದಲ್ಲಿಯೇ ಇದ್ದ ಆಳವಾದ ಗುಂಡಿಯ ಕಡೆಗೆ ಸೆಳೆಯಲ್ಪಟ್ಟು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದ ಮುಳುಗು ತಜ್ಞರು ಆಗಮಿಸಿ ದೇಹವನ್ನು ಮೇಲೆತ್ತುವ ಹೊತ್ತಿಗಾಗಲೇ ಪ್ರಥ್ವಿರಾಜ್ ಕೊನೆಯುಸಿರೆಳೆದಿದ್ದರು.
ನೆಲ್ಲಿಬೀಡು ಗ್ರಾಮದ ರವಿ ಎನ್ನುವವರ ಪುತ್ರ ಪೃಥ್ವಿರಾಜ್ ಕಳೆದ ವರ್ಷ ಕಳಸದಲ್ಲಿ ಎಸ್.ಎಸ್.ಎಲ್.ಸಿ. ಪೂರೈಸಿ ಪ್ರಸ್ತುತ ಬೆಂಗಳೂರಿನಲ್ಲಿ ಡಿಪ್ಲೋಮೋ ವ್ಯಾಸಾಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ ರಜೆ ಮೇಲೆ ಊರಿಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ.
ಪೃಥ್ವಿರಾಜ್ ಕುಟುಂಬದವರು ಮೂಲತಃ ತಮಿಳುನಾಡಿನವರು. ಹಲವು ದಶಕಗಳ ಹಿಂದೆಯೇ ಇವರು ಕುದುರೆಮುಖದಲ್ಲಿ ಉದ್ಯೋಗ ಅರಸಿ ಬಂದು ಇಲ್ಲಿಯೇ ನೆಲೆಯೂರಿದ್ದರು. ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯದಿಂದ ನೆಲ್ಲಿಬೀಡಿನಲ್ಲಿ ನೆಲೆಸಿದ್ದರು.
ಮೃತ ಪೃಥ್ವಿರಾಜ್ ತಂದೆ ತಾಯಿ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ. ಮಗನನ್ನು ಕಳೆದುಕೊಂಡು ಕುಟುಂಬದವರ ರೋಧನ ಮುಗಿಲು ಮುಟ್ಟಿದೆ. ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.