ಇತ್ತೀಚೆಗೆ ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಸಮೀಪದ ರಾಣಿಝರಿಯಲ್ಲಿ ಸಾವಿರ ಅಡಿ ಪ್ರಪಾತಕ್ಕೆ ಬಿದ್ದು ಬೆಂಗಳೂರು ಮೂಲದ ಭರತ್ ಎಂಬ ಯುವಕ ಆತ್ಮ ಹತ್ಯೆ ಮಾಡಿಕೊಂಡಿದ್ದರು. ಭರತ್ ಶವ ಹುಡುಕಲು ಸ್ಥಳೀಯ ಯುವಕರು, ಸಮಾಜಸೇವಕರು, ಮಾಧ್ಯಮದವರು ಹಾಗೂ ಪೊಲೀಸ್ ಇಲಾಖೆ ಹರಸಾಹಸ ಪಟ್ಟು ಶ್ರಮ ವಹಿಸಿ ಶವವನ್ನು ಪತ್ತೆ ಹಚ್ಚಿ ಸಾವಿರ ಅಡಿಯಿಂದ ಮೃತದೇಹವನ್ನು ಮೇಲೆತ್ತಿ ಕುಟುಂಬದವರಿಗೆ ಹಸ್ತಾಂತರಿಸಿದ್ದರು. ಈ ಶ್ರಮದ ಕೆಲಸ ಮಾಡಿದ ಸರ್ವರಿಗೂ ಭರತ್ ಸಂಬಂಧಿಕರಾದ ಗಿರೀಶ್ ಎಂಬುವರು ಬಾಳೂರು ಗ್ರಾಮಕ್ಕೆ ಶುಕ್ರವಾರ ಬಂದು ಸರ್ವರಿಗೂ ಅಭಿನಂದನೆ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ನಮ್ಮ ಭರತ್ ಮಲೆನಾಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ಅತಿ ದುಃಖದ ಸಂಗತಿಯಾಗಿದೆ. ಬಾಳೂರು ಪೊಲೀಸರು ಹಾಗೂ ಇಲ್ಲಿಯ ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಶವ ಹುಡುಕಲು ಕಾಡುಮೇಡು ಅಲೆದು ನಮಗೆ ಭರತ್ ನ ಮೃತದೇಹವನ್ನು ಹುಡುಕಿಕೊಟ್ಟಿದ್ದಾರೆ. ಕುಟುಂಬದ ಪರವಾಗಿ ಎಲ್ಲರಿಗೂ ಅಭಿನಂದಿಸುತ್ತೇನೆ. ಜನರ ಈ ಸ್ನೇಹ, ಸಹಕಾರ ನಾವು ಎಂದೂ ಮರೆಯುವಂತಿಲ್ಲ. ನಾವು ಸದಾ ಚಿರಋಣಿಯಾಗಿರುತ್ತೇವೆ’ ಎಂದರು.
ಈ ಸಂದರ್ಭದಲ್ಲಿ ಬಾಳೂರು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ವಿ. ಶ್ರೀನಾಥ್ ರೆಡ್ಡಿ, ಪೊಲೀಸ್ ಸಿಬ್ಬಂದಿಗಳು, ಸ್ಥಳೀಯ ಸಮಾಜ ಸೇವಕ ಮೊಹಮ್ಮದ್ ಆರೀಫ್, ಪ್ರೀತಮ್, ಮೇಘರಾಜ್, ಮಧುಕುಮಾರ್, ಕಿರಣ್, ಸಂಜಯ್ ಗೌಡ, ಸಂತೋಷ್ ಗೌಡ, ಗಣೇಶ್ ಹಾಗೂ ಸುಂಕಸಾಲೆ, ಬಲಿಗೆ, ಮೈದಾಡಿ, ದುರ್ಗದಹಳ್ಳಿಯ ಸ್ವಯಂ ಸೇವಕರು, ಜಾವಳಿ ಶೌರ್ಯ ವಿಪತ್ತು ಘಟಕದ ಸದಸ್ಯರು ಇದ್ದರು.
ರಾಣಿಝರಿಯಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪ್ರಪಾತದಲ್ಲಿ ಪತ್ತೆ : ವ್ಯೂ ಪಾಯಿಂಟ್ ನಿಂದ ಹಾರಿ ಆತ್ಮಹತ್ಯೆ ಶಂಕೆ