ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಭವಿಷ್ಯದಲ್ಲಿ ಉಜ್ವಲ ಜೀವನ ಸಾಗಿಸುವ ಜತೆಗೆ ದೇಶ ಕೂಡ ಅಭಿವೃದ್ಧಿ ಪತದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಜನ್ನಾಪುರ ಮೆಸ್ಕಾಂ ಕಿರಿಯ ಅಭಿಯಂತರ ಜಿ.ರವಿಕುಮಾರ್ ಭಂಡಾರಿ ಹೇಳಿದರು.
ಅವರು ಭಾನುವಾರ ಪಟ್ಟಣದಲ್ಲಿ ಮೂಡಿಗೆರೆ ತಾಲೂಕು ಭಂಡಾರಿ ಸಮಾಜದ ವತಿಯಿಂದ ಏರ್ಪಡಿಸಿದ್ದ 2023-24ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯೆ ಎಂಬ ಸಂಪತ್ತು ಗಳಿಸಿದರೆ ಭವಿಷ್ಯದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಮುಂದೆ ಈ ದೇಶದ ಆಸ್ತಿಯಾಗುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗಾಗಿ ನಮ್ಮ ಸಮಾಜದವರು ಆರ್ಥಿಕವಾಗಿ ಸಧೃಡರಾಗುವ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಭಂಡಾರಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಕೆ.ಷಣ್ಮುಖನಂದ ಮಾತನಾಡಿ, ಭಂಡಾರಿ ಸಮಾಜ ನಿರಂತರವಾಗಿ ಸಮುದಾಯದ ಅಭಿವೃದ್ಧಿಗಾಗಿ ಹಿಂದಿನಿಂದಲೂ ಶ್ರಮಿಸುತ್ತಲೇ ಇದೆ. ಇದಕ್ಕೆ ಬೆನ್ನೆಲುಬಾಗಿ ಬೆಂಗಳೂರಿನ ಭಂಡಾರಿ ಸಮಾಜ ನಿಂತಿರುವುದರಿಂದ ಸಮುದಾಯದ ಅಭಿವೃದ್ಧಿಗೆ ಇನ್ನಷ್ಟು ಬಲ ಬಂದಿದೆ. ಬೆಂಗಳೂರಿನ ಭಂಡಾರಿ ಸಮಾಜ ಪ್ರತಿ ವರ್ಷವೂ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಈ ಬಾರಿ 1.20 ಲಕ್ಷ ರೂ ನೀಡಿದೆ. ಇದನ್ನು ಸಮಾಜದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸನತ್ ಭಂಡಾರಿ, ಸೃಜನ್ ಭಂಡಾರಿ, ಸಿಂಚನ ಭಂಡಾರಿ, ಕೀರ್ತನ ಭಂಡಾರಿ, ಸಂಜನಾ ಭಂಡಾರಿ ಇವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಲೋಕೇಶ್ ಭಂಡಾರಿ, ನಾಗೇಶ್ ಭಂಡಾರಿ, ವನಿತಾ ಎಸ್.ಭಂಡಾರಿ, ಮಹೇಶ್ ಭಂಡಾರಿ, ಶಂಕುತಲಾ ಭಂಡಾರಿ, ಕವಿತಾ ಭಂಡಾರಿ, ರಾಜೇಶ್ವರಿ ಭಂಡಾರಿ ಮತ್ತಿತರರಿದ್ದರು.