ಜನವರಿ 13 ರಿಂದ ಸಕಲೇಶಪುರ ಭಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಅಭಿಮನ್ಯು ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮೊದಲ ದಿನವೇ ಯಶಸ್ವಿಯಾಗಿದೆ. ಕಾರ್ಯಾಚರಣೆ ಪ್ರಾರಂಭಿಸಿ ಎರಡೇ ಗಂಟೆಯಲ್ಲಿ ಪುಂಡಾನೆಯನ್ನು ಅಭಿಮನ್ಯು ತಂಡ ಸೆರೆಹಿಡಿದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್ನಲ್ಲಿ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ. ಮೂವರು ವೈದ್ಯರು ಹಾಗೂ ನುರಿತ ತಂಡದೊಂದಿಗೆ ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಯಲಿದೆ. ಇದರಲ್ಲಿ ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುತ್ತದೆ.
ಮೊದಲು ಮೂರು ಸಲಗಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲಿದೆ. ನಂತರ ಇನ್ನೂ ಏಳು ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸರ್ಕಾರದ ಮೌಖಿಕ ಆದೇಶ ನೀಡಿದೆ.
ಮೈಸೂರು ದಸರಾದಲ್ಲಿ 8 ಭಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನನ ಸಾವಿನ ಬಳಿಕ ಸ್ಥಗಿತವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಪುನಃ ಆರಂಭವಾಗಿದೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸಕಲೇಶಪುರ, ಆಲೂರು, ಅರೇಹಳ್ಳಿ ಸುತ್ತಮುತ್ತ ಪುಂಡಾಟ ನಡೆಸುತ್ತಿರುವ ಎಲ್ಲಾ ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದು ಸ್ಥಳಾಂತರ ಮಾಡುವ ತಯಾರಿ ಮಾಡಿಕೊಂಡಿದೆ.
ಇನ್ನು ಅರ್ಜುನನ್ನು ಕೊಂದ ಕಾಡಾನೆಯನ್ನೂ ಸೆರೆಹಿಡಿದು ಸಾಗಿಸುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿಯ ಕಾರ್ಯಾಚರಣೆಯಲ್ಲಿ ಆದ ತಪ್ಪುಗಳು ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ. ಈ ಬಾರಿ ಅಧಿಕಾರಿಗಳು ಮಾವುತರಿಗೆ, ಕಾವಾಡಿಗರಿಗೆ ಹಾಗೂ ಇಲಾಖೆ ಸಿಬ್ಬಂದಿಗೆ ಕಾರ್ಯಾಚರಣೆಗೂ ಮುನ್ನ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಕಳೆದ ಡಿಸೆಂಬರ್ 4 ರಂದು ಒಂಟಿ ಸಲಗ ದಾಳಿಗೆ ಅರ್ಜುನ ಆನೆ ಬಲಿಯಾಗಿತ್ತು. ಈ ಪ್ರಕರಣದಿಂದ ಕಾಡಾನೆ ಸೆರೆ ಕಾರ್ಯಾಚರಣೆಯು ಸ್ಥಗಿತಗೊಂಡಿತ್ತು.
ಇದೀಗ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ. ಅಭಿಮನ್ಯುವಿಗೆ ಸುಗ್ರೀವಾ, ಕರ್ನಾಟಕ ಭೀಮಾ, ಹರ್ಷ, ಪ್ರಶಾಂತ, ಅಶ್ವತ್ಥಾಮ, ಮಹೇಂದ್ರ, ಧನಂಜಯ ಸೇರಿ ಒಟ್ಟು ಎಂಟು ಸಾಕಾನೆಗಳು ಆಪರೇಷನ್ ನಲ್ಲಿ ಸಾಥ್ ನೀಡುತ್ತಿವೆ.
ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಆನೆ ಶಿಬಿರ ಪ್ರಾರಂಭಿಸಿದ್ದು, ಶುಕ್ರವಾರ ಆಪರೇಷನ್ ಆರಂಭಕ್ಕೂ ಮುನ್ನ ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಸಿಸಿಎಫ್ ರವಿಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಾಕಾನೆಗಳಿಗೆ ಪೂಜೆ ನೆರವೇರಿಸಿದ್ದರು.