ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಸಾಗುತ್ತಿದೆ. ಮಲೆನಾಡಿನ ಶ್ರೇಷ್ಠವಾದ ಸಂಸ್ಕøತಿ, ಕಲೆ ಸಂಪೂರ್ಣ ನಶಿಸಿಹೋಗುತ್ತಿದ್ದು, ಅದನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಮಲೆನಾಡು ಸಮಾನ ಮನಸ್ಕ ಮಹಿಳೆಯರ ಒಕ್ಕೂಟದಿಂದ ಜನವರಿ 14ರಂದು ಬೆಳಗ್ಗೆ 11 ಗಂಟೆಗೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಹಾಗೂ ಸುಗ್ಗಿ ಸಂಭ್ರಮಾಚರಣೆ ಸಮಿತಿ ಗೌರವ ಅಧ್ಯಕ್ಷೆ ಶ್ರೀಮತಿ ಮೋಟಮ್ಮ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಅಲ್ಲಿನ ಮಹಿಳೆಯರು ಆ ಭಾಗದ ಸಂಸ್ಕೃತಿಯನ್ನು ಯುವ ಜನತೆಗೆ ಪರಿಚಯಿಸುವ ಕಾರ್ಯಕ್ರಮಕ್ಕೆ ತಾನು ಭಾಗವಹಿಸಿದ್ದೆ. ಅದೇ ರೀತಿಯಲ್ಲಿ ನಮ್ಮ ಮಲೆನಾಡಿನಲ್ಲಿಯೂ ನಶಿಸಿ ಹೋಗಿರುವ ಮಲೆನಾಡಿನ ಜಾನಪದ, ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಪದ್ಧತಿಯನ್ನು ಪರಿಚಯಿಸುವ ಕಾರ್ಯಕ್ರಮ ಮಾಡಬೇಕೆಂದು ಉದ್ದೇಶಿಸಿ, ಎಲ್ಲಾ ಮಹಿಳಾ ಸಂಘಟನೆಗಳು ಒಗ್ಗೂಡಿಕೊಂಡು ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲೆನಾಡ ಅಡುಗೆ, ತೊಡುಗೆ, ಕೋಲಾಟ, ಮದುವೆ ಹಾಡುಗಳು, ಜಾನಪದ ನೃತ್ಯ. ಕಂಸಾಳೆ, ಒಗಟು, ಗಾದೆಗಳ ಸ್ಪರ್ಧೆ, ಹಳೆ ಸಾಂಪ್ರದಾಯಿಕ ಉಡುಗೆ, ತೊಡುಗೆ ನಡಿಗೆಯ ಪ್ರದರ್ಶನವಿರುತ್ತದೆ. ಅಲ್ಲದೇ ಮಲೆನಾಡು ಶೈಲಿಯ ತಿಂಡಿ, ತಿನಿಸು, ಖಾದ್ಯಗಳನ್ನೊಳಗೊಂಡ ಸ್ಟಾಲ್ಗಳು ಇರುತ್ತವೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಕಾರ್ಯಕ್ರಮಕ್ಕೆ ನಾಗರೀಕರು, ಯುವ ಜನತೆ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯೆ ಮತ್ತು ಸಮಿತಿಯ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಮಹಿಳೆಯರೆಲ್ಲರೂ ಸೇರಿ ಮೊಟ್ಟ ಮೊದಲ ಬಾರಿಗೆ ಮಲೆನಾಡ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಮೋಟಮ್ಮ ವಹಿಸಲಿದ್ದಾರೆ. ಉದ್ಘಾಟನೆಯನ್ನು ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಪ್ರಶಸ್ತಿ ವಿತರಣೆ ಶಾಸಕಿ ನಯನಾ ಮೋಟಮ್ಮ ನೆರವೇರಿಸಲಿದ್ದಾರೆ. ಸಾಹಿತಿ ಹಿರೇಮಗಳೂರು ಕಣ್ಣನ್, ಚಲನಚಿತ್ರ ನಟರಾದ ನರೇಂದ್ರಬಾಬು, ನಿನಾಸಂ ಗಣೇಶ್ ಹೆಗ್ಗೂಡು, ಕಿರಿತೆರೆ ನಟಿ ಶರ್ಮಿತಗೌಡ ಭಾಗವಹಿಸಲಿದ್ದಾರೆಂದು ಹೇಳಿದರು.
ಮಲೆನಾಡು ಸಾಂಸ್ಕೃತಿಕ ಸುಗ್ಗಿ ಸಂಭ್ರಮಾಚರಣೆ ಸಮಿತಿಯ ಪದಾಧಿಕಾರಿಗಳಾದ ನಿರ್ಮಲಾ ಮಂಚೇಗೌಡ, ಕಲಾವತಿ ರಾಜಣ್ಣ, ಸುಚಿತ್ರ ಪ್ರಸನ್ನ, ಗೀತಾ ಲೋಕೇಶ್, ಮಾಲಾ ಧಶರಥ್, ಜಮುನಾ ಲೋಕಪ್ಪಗೌಡ, ಪವಿತ್ರ ರತೀಶ್ ಉಪಸ್ಥಿತರಿದ್ದರು.