ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಕ್ಯಾಂಪೂರಿಯನ್ ಶಿಬಿರ ಜನವರಿ 6 ಮತ್ತು 7ರಂದು ಮೂಡಿಗೆರೆ ತಾಲೂಕಿನ ಜನ್ನಾಪುರದ ಎಲೈಟ್ ಮೈಂಡ್ಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಮಾಸ್ಟರ್ ರಕ್ಷಿತ್ ಬಾಳೂರು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ತರಬೇತಿ ಹಾಗೂ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನವರಿ6ರಂದು ಜನ್ನಾಪುರದ ಎಲೈಟ್ ಮೈಂಡ್ಸ್ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ಹಿಸ್ಟ್ರಿ ಮೂಮೆಂಟ್, 4 ಬಂಧಕ, ಅರಣ್ಯ ಸಂರಕ್ಷಣೆ, ಅಪರಾಧ ಬಗ್ಗೆ ಕಾನೂನು ಅರಿವು, ಮಧ್ಯಾಹ್ನ 2.30ಗಂಟೆಗೆ ಅಗ್ನಿ ಸುರಕ್ಷತೆ, ಸಾಹಸ ಚಟುವಟಿಕೆ, ಶಿಬಿರಾಗ್ನಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಅವಿನ್ ಸ್ವರ ಸಂಗಮ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಜ.7ರಂದು ಕಾಲ್ನಡಿಗೆ ಮೂಲಕ ಗವಿಗುಡ್ಡಕ್ಕೆ ಚಾರಣ ಹಮ್ಮಿಕೊಳ್ಳಲಾಗಿದೆ. ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಮಿತಿ ಮುಖ್ಯಸ್ಥ ಷಡಕ್ಷರಿ, ರಾಜ್ಯ ಸಮಿತಿಯ ಪ್ರಭಾಕರ್ ಭಟ್, ಉಪಾಧ್ಯಕ್ಷ ಎ.ಎನ್.ಮಹೇಶ್ ಆಗಮಿಸಲಿದ್ದಾರೆಂದು ಹೇಳಿದರು.
ಗೋಷ್ಠಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗೌರವಾಧ್ಯಕ್ಷ ಗಣೇಶ್ ಮಗ್ಗಲಮಕ್ಕಿ, ಉಪಾಧ್ಯಕ್ಷೆ ಸುಚಿತ್ರ ಪ್ರಸನ್ನ, ಕ್ಯಾಫ್ಟನ್ ಅಶ್ವಿನಿ ಉಪಸ್ಥಿತರಿದ್ದರು.