ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ಕಾಫಿ ಬೆಳೆಗಾರರ ಆಸ್ತಿ ಹರಾಜಿಗೆ ಕಾರಣವಾಗುತ್ತಿರುವ ಸರ್ಫಾಸಿ ಕಾಯ್ದೆಯ ಕುರಿತಾಗಿ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವರಾದ ಪಿಯುಷ್ ಗೋಯಲ್ ರಿಗೆ ಸೂಕ್ತವಾಗಿ ಮನವರಿಕೆ ಮಾಡಲೆಂದು ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟ(ಕೆ.ಜಿ.ಎಫ್)ದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು, ಗೌರವ ಕಾರ್ಯದರ್ಶಿ ಕೆ. ಡಿ.ಮನೋಹರ್, ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಟಿ.ಪಿ.ಸುರೇಂದ್ರ, ಚಿಕ್ಕಮಗಳೂರಿನ ಶ್ರೇಯಸ್ ಹಾಗೂ ಕೊಡಗಿನ ಬೆಳೆಗಾರರಾದ ಪ್ರದೀಪ್ ಪೂವಯ್ಯನವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಯೋಗದ ಮನವಿಗೆ ಸ್ಪಂದಿಸಿರುವ ದೇವೇಗೌಡರು ಈ ಬಗ್ಗೆ ಸಂಬಂಧಿಸಿದ ಕೇಂದ್ರ ಸಚಿವರುಗಳ ಬಳಿ ಮಾತನಾಡುವ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ; ಸರ್ಫಾಸಿ ಕಾಯ್ದೆಯನ್ನು ಬಳಸಿಕೊಂಡು ಬ್ಯಾಂಕುಗಳು ಈಗ ಸಾಲ ಸುಸ್ತಿಯಾಗಿರುವ ಕಾಫಿ ಬೆಳೆಗಾರರ ಆಸ್ತಿಯನ್ನು ಬಹಿರಂಗ ಹರಾಜು ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಸಾಲಗಾರರಿಗೆ ಯಾವುದೇ ಕಾಲಾವಕಾಶವನ್ನು ನೀಡದೇ ಪತ್ರಿಕೆಗಳ ಮೂಲಕ ಹರಾಜು ನೋಟೀಸ್ ಪ್ರಕಟಿಸಿ ಆನ್ ಲೈನ್ ಮೂಲಕ ತೋಟಗಳನ್ನು ಹರಾಜು ಮಾಡುವ ನಿಟ್ಟಿನಲ್ಲಿ ಬ್ಯಾಂಕುಗಳು ಮುಂದಾಗಿವೆ. ಇದರಿಂದ ಅನೇಕ ಬೆಳೆಗಾರರು ತಾವು ಪಡೆದಿರುವ ಅಲ್ಪಸ್ವಲ್ಪ ಸಾಲಕ್ಕೆ ತೋಟಗಳನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಬೆಳೆಗಾರರ ಸಂಘ ಈಗಾಗಲೇ ಮೂಡಿಗೆರೆ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆಯನ್ನು ಸಹ ನಡೆಸಿದೆ. ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಲೆಕ್ಕಿಸದೇ ಬ್ಯಾಂಕುಗಳು ಸರ್ಫಾಸಿ ಕಾಯ್ದೆಯನ್ನು ಕಾಫಿ ಬೆಳೆಗಾರರ ಮೇಲೆ ಹೇರಲು ಮುಂದಾಗಿವೆ. ಇದೀಗ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸಂಪರ್ಕಿಸಿ ಸಹಾಯ ಕೋರಿದ್ದೇವೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.