ದತ್ತಜಯಂತಿ ಸಂದರ್ಭದಲ್ಲಿ ದತ್ತಭಕ್ತರು ಬರುವ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಹೋಟೆಲ್ ಗಳನ್ನು ಬಂದ್ ಮಾಡಿಸುವ ಪೊಲೀಸ್ ಇಲಾಖೆಯ ನಿರ್ಧಾರಕ್ಕೆ ಬಿ.ಜೆ.ಪಿ. ಯುವ ಮೋರ್ಚಾ ತನ್ನ ಅಸಮದಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಮೂಡಿಗೆರೆ ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಜನ್ನಾಪುರ ಪತ್ರಿಕೆಯೊಂದಿಗೆ ಮಾತನಾಡಿ ; ದತ್ತಜಯಂತಿ ಹಲವು ವರ್ಷಗಳಿಂದ ಶಾಂತಿಯುತವಾಗಿ ನಡೆದುಕೊಂಡು ಬರುತ್ತಿದೆ. ದತ್ತಮಾಲಾದಾರಿಗಳು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ತಮ್ಮ ಹೋರಾಟ ಮುಂದುವರಿಸಿಕೊಂಡು ಬಂದಿದ್ದಾರೆ.
ಆದರೆ ಇತ್ತೀಚೆಗೆ ಕಳೆದ ವರ್ಷದಿಂದ ದತ್ತಭಕ್ತರು ಸಂಚರಿಸುವ ಪ್ರಮುಖ ರಸ್ತೆಗಳಲ್ಲಿ ಅಂಗಡಿ, ಹೋಟೆಲ್ ಗಳನ್ನು ಬಂದ್ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡುತ್ತಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಭಾಗದಿಂದ ಬರುವ ಮಾರ್ಗ ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಹಾಂದಿ, ಆಲ್ದೂರು ಮುಂತಾದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿರುವುದು ಸಾರ್ವಜನಿಕರಿಗೆ ಮತ್ತು ದತ್ತಭಕ್ತರಿಗೆ ತುಂಬಾ ತೊಂದರೆ ಉಂಟುಮಾಡುತ್ತಿದೆ.
ದತ್ತಜಯಂತಿಗೆ ದೂರದ ಊರುಗಳಿಂದ ಬರುವ ಆಗಮಿಸುವವರಿಗೆ ಕುಡಿಯುವ ನೀರು ಸಹ ಸಿಗದಂತಹ ಪರಿಸ್ಥಿತ ನಿರ್ಮಾಣ ಆಗಿದೆ. ಅನೇಕ ಜನರು ಊಟ ತಿಂಡಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನನಿತ್ಯದ ವ್ಯವಹಾರಗಳನ್ನು ನಡೆಸುವವರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಚಿಕ್ಕಮಗಳೂರು ನಗರದಲ್ಲಿಯೇ ಯಾವುದೇ ಅಂಗಡಿಗಳನ್ನು ಬಂದ್ ಮಾಡಿಸಿಲ್ಲ. ಆದರೆ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ ಬಂದ್ ಮಾಡಿಸುವ ಅವಶ್ಯಕತೆ ಏನಿದೆ.
ಮುಂಬರುವ ವರ್ಷಗಳಲ್ಲಿ ಮದ್ಯದಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡಿಸಬಾರದು ಎಂದು ಆಗ್ರಹಿಸಿದ್ದಾರೆ.