ದತ್ತ ಜಯಂತಿ ಹಿನ್ನಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೇ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಿಂದ ಪ್ರಾರಂಭವಾಗಿ ದಕ್ಷಿಣಕನ್ನಡ ಭಾಗದಿಂದ ದತ್ತಪೀಠಕ್ಕೆ ಸಾಗುವ ಮುಖ್ಯರಸ್ತೆಯ ಇಬ್ಬದಿಯ ಅಂಗಡಿ ಮುಂಗಟ್ಟುಗಳು ಮಂಗಳವಾರ ಬಂದ್ ಆಗಲಿವೆ.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿ ಮಂಗಳವಾರ ನಡೆಯುವ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗ ಕೊಟ್ಟಿಗೆಹಾರದಿಂದ ಬಣಕಲ್, ಚಕ್ಕಮಕ್ಕಿ, ಬಗ್ಗಸಗೋಡು, ಸಬ್ಬೇನಹಳ್ಳಿ, ಹೊರಟ್ಟಿ, ಹ್ಯಾಂಡ್ ಪೋಸ್ಟ್, ಮೂಡಿಗೆರೆ, ಹಾಂದಿ, ಆಲ್ದೂರು ಮುಂತಾದ ಮುಖ್ಯರಸ್ತೆ ಹಾದು ಹೋಗುವ ಗ್ರಾಮಗಳ ಹೆದ್ದಾರಿ ಬದಿಯ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ.
ಪೆಟ್ರೋಲ್ ಬಂಕ್, ಮೆಡಿಕಲ್, ಹಾಲು ಮಾರಾಟ ಮಳಿಗೆ ಹೊರತು ಪಡಿಸಿ ಉಳಿದ ಹೋಟೆಲ್ ಅಂಗಡಿ ಮುಂಗಟ್ಟುಗಳು ಸೋಮವಾರ ರಾತ್ರಿ 10 ಗಂಟೆಯಿಂದ ಮಂಗಳವಾರ ರಾತ್ರಿ 10 ಗಂಟೆಯವರೆಗೆ ಬಂದ್ ಇರಲಿವೆ.
ದತ್ತ ಜಯಂತಿ ಹಿನ್ನಲೆಯಲ್ಲಿ ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು ದಕ್ಷಿಣಕನ್ನಡದಿಂದ ಬರುವ ಮತ್ತು ಹೋಗುವ ವಾಹನಗಳ ಸಂಖ್ಯೆ ದಾಖಲೆ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತಿದೆ. ಕೊಟ್ಟಿಗೆಹಾರದ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕೊಟ್ಟಿಗೆಹಾರ ಪೊಲಿಸ್ ಚೆಕ್ಪೋಸ್ಟ್ ನಲ್ಲಿ ಬೀದರ್ ಪಿಎಸ್ಐ ಅಮರ್, ಬಣಕಲ್ ಪೊಲೀಸ್ ಠಾಣಾ ಪಿಎಸ್ಐ ರೇಣುಕಾ, ಎಎಸ್ಐ ಶಶಿ, ವಿಶೇಷ ಕಾರ್ಯ ನಿರ್ವಾಹಣ ದಂಡಾಧಿಕಾರಿ ಕೃಷ್ಣ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಪೊಲೀಸ್ ಸಿಬ್ಬಂದಿಗಳಾದ ನವೀನ್, ಅಜಯ್, ಪಾರಗೊಂಡ, ಅರಣ್ಯ ಗಸ್ತು ಅಧಿಕಾರಿ ವಿಜಯ್, ಪರಮೇಶ್, ಶುಭ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದು ಯಾವುದೇ ಅಹಿತಕರ ಘಟನಗಳು ನಡೆಯದಂತೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.