ಮಲೆನಾಡು ಗಿಡ್ಡ ಗೋ ತಳಿಗಳು ಈ ನೆಲದ ಅಸ್ಮಿತೆಯಾಗಿದ್ದು ಅವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಮೂಡಿಗೆರೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿರಮೇಶ್ ಹೇಳಿದರು.
ಮೂಡಿಗೆರೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮತ್ತು ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ಜನ್ನಾಪುರದ ಪಶು ಚಿಕಿತ್ಸಾಲಯದ ಆವರಣದಲ್ಲಿ ನಡೆದ ಕರು ಮತ್ತು ಹಸುಗಳ ಪ್ರದರ್ಶನ ಹಾಗೂ ಬರಡು ರಾಸು ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಲೆನಾಡು ಗಿಡ್ಡ ಕರ್ನಾಟಕದ ವಿಶಿಷ್ಟ ಜಾನುವಾರು ತಳಿಯಾಗಿದೆ. ಮಲೆನಾಡು ಗಿಡ್ಡ ತಳಿಗಳ ಮಹತ್ವವನ್ನು ಅರಿತು ಇದರ ಅಭಿವೃದ್ದಿಗೆ ಮುಂದಾಗಬೇಕಿದೆ. ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಪಲಾನುಭವಿಗಳು ಪಡೆದುಕೊಳ್ಳಬೇಕಿದೆ ಎಂದರು.
ಗೋಣಿಬೀಡಿನ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಮಾತನಾಡಿ, ಸಾಕುಪ್ರಾಣಿಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವಿನ ಅವಿನಾಭಾವ ಸಂಬಂಧ ಪದಗಳಿಗೆ ನಿಲುಕಲಾರದು. ಸಾಕುಪ್ರಾಣಿಗಳ ಆರೋಗ್ಯ ಸಂರಕ್ಷಣೆ, ಆಹಾರ ಮುಂತಾದವುಗಳ ಮಾಹಿತಿ ಹಾಗೂ ಚಿಕಿತ್ಸೆಯನ್ನು ನೀಡುವುದರ ಮೂಲಕ ಕಾರ್ಯ ನಿರ್ವಹಿಸುವ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಜೊತೆಗೆ ನಿಕಟ ಸಂಪರ್ಕವನ್ನು ಪ್ರಾಣಿಪ್ರಿಯರು ಇಟ್ಟುಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶ್ವಾನಗಳಿಗೆ ರೇಬಿಸ್ ಉಚಿತ ಲಸಿಕೆಯನ್ನು ಹಾಕಲಾಯಿತು. ಆಯ್ದ ರಾಸುಗಳ ವಾರಸುದಾರರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ.ಮನು, ಡಾ.ಅಶೋಕ್, ಜಾನುವಾರು ಅಭಿವೃದ್ದಿ ಅಧಿಕಾರಿ ಪದ್ಮೇಗೌಡ, ಜಾನುವಾರು ಅಧಿಕಾರಿ ನವೀನ್, ಜಾನುವಾರು ಅಧಿಕಾರಿ ನವೀನ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ನಯನಕುಮಾರ್, ಪೂರ್ವಾಧ್ಯಕ್ಷರಾದ ರತನ್, ಶೈಲೇಶ್, ಜಗದೀಶ್, ಚಿನ್ನಿಗ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ, ಮಾಜಿ ಅಯಕ್ಷ ಸುನೀಲ್, ಸದಸ್ಯರಾದ ಪ್ರಹ್ಲಾದ್, ಭಾಗ್ಯ, ಸಲ್ಮಾ ಮುಂತಾದವರು ಇದ್ದರು.