ದತ್ತಜಯಂತಿ ಪ್ರಯುಕ್ತ ದತ್ತಮಾಲಾದಾರಿಗಳು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೂಡಿಗೆರೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ಶೋಭಾಯಾತ್ರೆ ಹಮ್ಮಿಕೊಂಡಿದ್ದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದತ್ತಮಾಲಾದಾರಿಗಳು ಮೆರವಣಿಗೆ ನಡೆಸಿದರು. ನಂತರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಧಾರ್ಮಿಕ ಸಭೆ ನಡೆಸಿದರು.
ಸಭೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಮಾತನಾಡಿದರು. ಬೆಂಗಳೂರಿನಿಂದ ಬಂದಿದ್ದ ವಾಗ್ಮಿ ಹಾರಿಕಾ ಮಂಜುನಾಥ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಅವರು ಮಾತನಾಡಿ : ಹಿಂದೂ ಸಮಾಜ ಈಗ ಎಚ್ಚೆತ್ತುಕೊಂಡಿದೆ. ಶತಮಾನಗಳ ಕಾಲ ನಮ್ಮ ಸಮಾಜದ ಮೇಲೆ ನಡೆದಿರುವ ದೌರ್ಜನ್ಯ ದಾಳಿಯಿಂದ ನಮ್ಮ ಧರ್ಮವನ್ನು ಎಳ್ಳಷ್ಟು ಕುಗ್ಗಿಸಲು ಸಾಧ್ಯವಾಗಿಲ್ಲ. ಹಿಂದೂ ಎಂದಿಗೂ ದ್ವೇಷ ಮನೋಭಾವನೆಯಿಂದ ವರ್ತಿಸಿಲ್ಲ. ನಾವು ಎಲ್ಲರನ್ನು ಪ್ರೀತಿಯಿಂದ ಕಂಡಿದ್ದೇವೆ. ಹಿಂದೂ ಸಮಾಜವನ್ನು ಕೆಣಕುವ ಸಾಹಸಕ್ಕೆ ಯಾರು ಮುಂದಾಗಬಾರದು. ಹಿಂದೂ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಇಡೀ ಜಗತ್ತು ಈಗ ನಮ್ಮತ್ತ ನೋಡುತ್ತಿದೆ. ದತ್ತಪೀಠ ವಿಮೋಚನೆಯ ಹಾದಿಯಲ್ಲಿ ನಾವು ಸಾಕಷ್ಟು ದೂರ ನಡೆದುಬಂದಿದ್ದೇವೆ. ರಾಜಕೀಯ ಕಾರಣಗಳಿಗಾಗಿ ಇನ್ನೂ ನಮ್ಮ ಪೂರ್ಣ ಗುರಿ ತಲುಪಲು ಸಾಧ್ಯವಾಗಿಲ್ಲ. ಯುವಕರು ರಾಜಕೀಯದ ಕೈಗೊಂಬೆಯಾಗದೇ ಸ್ವಾಭಿಮಾನದಿಂದ ದೇಶಕ್ಕಾಗಿ ಧರ್ಮಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಬೇಕು ಎಂದರು.
ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ಸಾಲುಮರ ಮಹೇಶ್, ಅಜಿತ್ ಮುಂತಾದವರು ಮಾತನಾಡಿದರು. ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಬಿ.ಜೆ.ಪಿ. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಡಿ.ಜೆ. ಹಾಡಿಗೆ ಪೊಲೀಸರ ಅಡ್ಡಿ ; ಕಾರ್ಯಕರ್ತರ ಅಸಮದಾನ
ದತ್ತಜಯಂತಿ ಶೋಭಾಯಾತ್ರೆ ಮೂಡಿಗೆರೆ ಎಂ.ಜಿ. ರಸ್ತೆಯಲ್ಲಿ ಸಾಗುತ್ತಿದ್ದಾಗ ಡಿ.ಜೆ.ಹಾಡನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದಾಗ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ದತ್ತಜಯಂತಿ ಬಂದೋಬಸ್ತಿಗೆ ನಿಯೋಜನೆಯಾಗಿದ್ದ ಪೊಲೀಸ್ ಅಧಿಕಾರಿ ಶ್ರೀನಿಧಿಯವರು ಡಿ.ಜೆ. ಹಾಡು ನಿಲ್ಲಿಸಿ ಎಂದು ನೀಡಿದ ಸೂಚನೆ ಕಾರ್ಯಕರ್ತರನ್ನು ಕೆರಳಿಸಿತು. ಪೊಲೀಸರ ವರ್ತನೆಯನ್ನು ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದರು. ಪೊಲೀಸರು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಾರ್ಯಕರ್ತರು ತಮ್ಮ ಅಸಮದಾನ ವ್ಯಕ್ತಪಡಿಸಿದರು. ಪೊಲೀಸರ ವಿರೋಧವನ್ನು ಲೆಕ್ಕಿಸದೇ ಕಾರ್ಯಕರ್ತರು ಹಾಡಿಗೆ ಹೆಜ್ಜೆಹಾಕುತ್ತಾ ಮೆರವಣಿಗೆ ಮುಂದುವರಿಸಿದರು.