ಮೂಡಿಗೆರೆ ಪಟ್ಟಣದ ಶ್ರೀ ಹಿರೇ ದೇವಿರಮ್ಮ ಬನ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ದೀಪೋತ್ಸವದ ಅಂಗವಾಗಿ ಶುಕ್ರವಾರ ಅನ್ನ ಸಂತರ್ಪಣೆ ನಡೆಯಿತು.
ಸಾವಿರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಗಣಪತಿ ಹೋಮ, ನಾಗದೇವರಿಗೆ ಆಶ್ಲೇಷ ಬಲಿ, ಅಯ್ಯಪ್ಪಸ್ವಾಮಿ, ಗಣಪತಿ, ಸುಬ್ರಹ್ಮಣ್ಯ ಸ್ವಾಮಿ ಮತ್ತು ಹಿರೇ ದೇವಿರಮ್ಮ ಅವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಅಯ್ಯಪ್ಪ ಮಾಲಾದಾರಿಗಳು ಅನ್ನಸಂತರ್ಪಣೆ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಿಕೊಟ್ಟರು. ಸಂಜೆ 5 ಗಂಟೆಗೆ ಶ್ರೀ ಅಯ್ಯಪ್ಪಸ್ವಾಮಿ ಅವರಿಗೆ ಶ್ರೀರಂಗ ಪೂಜೆ, ದೀಪೋತ್ಸವದ ವಿಶೇಷ ಪೂಜೆ, ತೀರ್ಥ ಪ್ರಸಾಧ, ಅನ್ನಸಂತರ್ಪಣೆ, ಹರಿವರಾಸನಂ ನಡೆಯಿತು.
ಇಂದು ಡಿಸೆಂಬರ್ 23ರಂದು ಸಂಜೆ ಶ್ರೀ ಹಿರೇದೇವಿರಮ್ಮ ಬನದ ಆವರಣದಿಂದ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಿಶೇಷ ರಥದೊಂದಿಗೆ ಹಾಗೂ ಕೇರಳದ ಸಿಂಗಾರಿಮೇಳ, ಚಂಡೆವಾಧ್ಯದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಿಂದ ಗಂಗನಮಕ್ಕಿಯ ಮಹಾ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ ಮಹಿಳೆಯರು ಗಂಗೆ ಕಳಸ ಹೊತ್ತು, ಮಕ್ಕಳು ದೀಪ ಹಿಡಿದು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ನೆರವೇರಲಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.