ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಹೋಬಳಿ ಹಾಂದಿ ಗ್ರಾಮದಲ್ಲಿ ದತ್ತಜಯಂತಿ ಪ್ರಯುಕ್ತ ಕೇಸರಿ ಬಂಟಿಂಗ್ಸ್ ಮತ್ತು ಧ್ವಜ ಕಟ್ಟುವ ವಿಚಾರದಲ್ಲಿ ಎರಡು ಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಹಾಂದಿ ಮುಖ್ಯರಸ್ತೆಯಲ್ಲಿ ಕೇಸರಿ ಧ್ವಜ ಕಟ್ಟುತ್ತಿದ್ದ ವೇಳೆ ಗುರುವಾರ ರಾತ್ರಿ ಕೆಲ ಮುಸ್ಲೀಂ ಯುವಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಧ್ವಜ ಕಟ್ಟುತ್ತಿದ್ದ ದತ್ತ ಮಾಲಾಧಾರಿಗಳ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ದತ್ತಮಾಲಾದಾರಿಗಳು ಆರೋಪಿದ್ದಾರೆ.
ದತ್ತಜಯಂತಿ ಹಿನ್ನೆಲೆ ಗ್ರಾಮದಲ್ಲಿ ಅಲಂಕಾರ ಮಾಡುತ್ತಿದ್ದ ವೇಳೆ ಅನ್ಯಕೋಮಿನ ಯುವಕರ ತಂಡದಿಂದ ಬಂಟಿಂಗ್ಸ್ ಕಟ್ಟುವುದಕ್ಕೆ ವಿರೋಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂದರ್ಭದ ವಿಡಿಯೋ ಒಂದು ವೈರಲ್ ಆಗಿದೆ.
ಹಾಂದಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲಂಕಾರ ಮಾಡುತ್ತಿದ್ದ ದತ್ತಮಾಲಾಧಾರಿಗಳು.
ದತ್ತಜಯಂತಿ ಹಿನ್ನೆಲೆ ದತ್ತಮಾಲೆ ಧಾರಣೆ ಮಾಡಿರುವ ವಿ.ಎಚ್.ಪಿ. ಹಾಗೂ ಭಜರಂಗದಳ ಕಾರ್ಯಕರ್ತರು ಗುರುವಾರ ರಾತ್ರಿ ಹಾಂದಿ ಸಮೀಪ ಕೇಸರಿ ಅಲಂಕಾರ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಆಲ್ದೂರು ಠಾಣೆಯಲ್ಲಿ ಉಭಯ ಕಡೆಯವರನ್ನು ಕರೆಸಿ ಮಾತುಕತೆ ನಡೆಸಲಾಗುತ್ತಿದ್ದು , ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರಿಕೆ ನೀಡಲಾಗಿದೆ.