ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ವಯೋಮಾನದ ಮಕ್ಕಳು ಹೃದಯಾಘಾತದಂತಹ ಕಾಯಿಲೆಗೆ ತುತ್ತಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ಅಂಶವಾಗಿದೆ.
ಇತ್ತೀಚೆಗೆ ಮೂಡಿಗೆರೆ ತಾಲ್ಲೂಕು, ಗೋಣೀಬೀಡು ಹೋಬಳಿ, ಅಣಜೂರು ಗ್ರಾಮದ ಪ್ರಥಮ ಬಿ.ಎ. ವಿದ್ಯಾರ್ಥಿನಿ ರಮ್ಯಾ ಏಕಾಏಕಿ ಮಾರಕ ಖಾಯಿಲೆಗೆ ತುತ್ತಾಗಿ ದಿನಾಂಕ 18-12-2023 ನಿಧನಳಾಗಿರುವುದು ಹಾಗೂ ದಿನಾಂಕ 20-12-2023 ರಂದು ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿ, ಕೆಸವಳಲು ಗ್ರಾಮದ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು 13 ವರ್ಷದ ಸೃಷ್ಟಿ ಎಂಬ ವಿದ್ಯಾರ್ಥಿನಿ ಶಾಲೆಗೆ ಹೋಗುವಾಗಲೇ ದಾರಿಮದ್ಯದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ಇದಕ್ಕೆ ಒಂದು ಜ್ವಲಂತ ಉದಾಹರಣೆಗಳಾಗಿವೆ.
ಗ್ರಾಮೀಣ ಭಾಗದಲ್ಲಿನ ರೈತರು, ಕೂಲಿ ಕಾರ್ಮಿಕ ವರ್ಗದ ಪೋಷಕರು ಕೂಲಿನಾಲಿ ಮಾಡಿ ಮಕ್ಕಳನ್ನು ವ್ಯಾಸಂಗ ಮಾಡಿಸುತ್ತಿದ್ದು ಅವರಿಗೆ ಮಕ್ಕಳ ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ ಹಾಗೂ ಕಲುಷಿತಗೊಂಡಿರುವ ವಾತಾವರಣದಲ್ಲಿ ನಾವು ಸೇವಿಸುವ ಆಹಾರ ಮತ್ತು ಆಹಾರದ ಕ್ರಮವೂ ಸಮತೋಲನವಿಲ್ಲದೆ, ಸರಿಯಾದ ಪೌಷ್ಠಿಕ ಆಹಾರದ ಕೊರತೆ, ಸೂಕ್ತ ಸಮಯದಲ್ಲಿ ವೈದ್ಯಕೀಯ ತಪಾಸಣೆಯ ಕೊರತೆ ಎದ್ದುಕಾಣುತ್ತಿದೆ.
ರಾಜ್ಯದಲ್ಲಿ ಬಹುತೇಕ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ಕೊರತೆ ಎದ್ದುಕಾಣುತ್ತಿದ್ದು ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಲಾಗಿದೆ.
ಕೋವಿಡ್ನ ಹೊಸತಳಿಯು ರಾಜ್ಯದಲ್ಲಿ ಕಂಡುಬರುತ್ತಿದ್ದು ಸರ್ಕಾರ ಈ ಕೂಡಲೇ ಎಚ್ಚೆತ್ತು ರಾಜ್ಯದಾದ್ಯಂತ ಪ್ರತಿತಿಂಗಳು ಆರೋಗ್ಯ ಇಲಾಖೆ ವತಿಯಿಂದ ನಗರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಎಲ್.ಕೆ.ಜಿ. ಶಾಲೆಯಿಂದ ಪ್ರಾರಂಭಗೊಂಡು ಪದವಿ ಶಿಕ್ಷಣದವರೆಗೆ ಶಾಲಾ ಕಾಲೇಜುಗಳಲ್ಲಿ ಪ್ರತಿಮಾಹೆ ಸರ್ಕಾರ ಉಚಿತ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ.
ಬಿ.ಎಂ ಮಂಜುನಾಥ್ ಬೆಟ್ಟಗೆರೆ ,
ಅಧ್ಯಕ್ಷರು, ಛಲವಾದಿ ಮಹಸಭಾ, ಮೂಡಿಗೆರೆ ತಾಲ್ಲೂಕು ಸಮಿತಿ.