ಕಟ್ಟಡ ಕಾರ್ಮಿಕರ ಸ್ವಯಂ ಘೋಷಣಾ ಪತ್ರವನ್ನು ಹಿಂದಿನ ಪದ್ಧತಿಯಂತೆ ಜಾರಿಗೊಳಿಸಿ ಅರ್ಹ ಕಟ್ಟಡ ಕಾರ್ಮಿಕರಿಗೆ ಅರ್ಜಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘವು ಎ.ಐ.ಟಿ.ಯು.ಸಿ. ನೇತೃತ್ವದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್ಕುಮಾರ್ ಕಾರ್ಮಿಕರ ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ್ಗಳನ್ನು ತಡೆಯಲು ಜಾರಿ ಮಾಡಿರುವ ಸ್ವಯಂ ಘೋಷಣಾ ಪತ್ರವು ಕಟ್ಟಡ ಕಾರ್ಮಿಕರಿಗಳಿಗೆ ಹೊಸ ಅರ್ಜಿ ಮತ್ತು ನವಿಕರಣ ಸೌಲಭ್ಯಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ದೂರಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆಯಲ್ಲಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಕಾರ್ಮಿಕರ ಇಲಾಖೆಯಿಂದ ಯಾರಿಗೂ ಸಹ ನೋಂದಣಿ ಸಂಖ್ಯೆ ನೀಡಿರುವುದಿಲ್ಲ. ಹಾಗೂ ನಿರ್ಮಾ ಣ ಕಾಮಗಾರಿಗೆ ನಗರ ಸ್ಥಳೀಯ ಶಾಸನಾತ್ಮಕ ಪ್ರಾಧಿಕಾರದಿಂದ ಪಡೆದ ಅನುಮೋದನೆ ಸಂಖ್ಯೆಯನ್ನು ನೀಡಲು ಮನೆಯ ಮಾಲೀಕರು ಒಪ್ಪುತ್ತಿಲ್ಲ ಎಂದರು.
ಸ್ವಯಂ ಘೋಷಣಾ ಪತ್ರವನ್ನು ಜಾರಿ ಮಾಡಿ ಬೋಗಸ್ ಕಾರ್ಡ್ಗಳನ್ನು ತಡೆಗಟ್ಟಲು ಹೊರಟಿರುವ ಕಾರ್ಮಿ ಕ ಕಲ್ಯಾಣ ಮಂಡಳಿಯು ನೈಜ ಕಾರ್ಮಿಕರಿಗೆ ನ್ಯಾಯವನ್ನು ದೊರಕಿಸಿಕೊಡುವ ಬದಲು ಅನ್ಯಾಯವೆಸಗುತ್ತಿದೆ. ಇದರಿಂದ ಸ್ಥಳೀಯವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿ ಹೊರರಾಜ್ಯದ ಕಾರ್ಮಿಕರಿಗೆ ಮಣೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ರಘು ಮಾತನಾಡಿ ಪ್ರಸ್ತುತ ಜಾರಿಗೆ ಮುಂದಾಗಿರುವ ಸ್ವಯಂ ಘೋಷಣಾ ಪತ್ರ ಹಾಗೂ ಇತರೆ ಎಲ್ಲಾ ಕಾನೂನುಗಳು ನೈಜ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು. ಬೋ ಗಸ್ ಕಾರ್ಡ್ಗಳನ್ನು ತಡೆಗಟ್ಟಲು ಸಂಘವು ಸಂಪೂರ್ಣ ಸಹಕಾರ ನೀಡಲಾಗುವುದರಿಂದ ಅನುಪಯುಕ್ತ ಆದೇಶವನ್ನು ಹಿಂಪಡೆದು ಕಾರ್ಮಿಕರಿಗೆ ಬೆಲೆಯೇರಿಕೆಗೆ ಅನುಗುಣವಾಗಿ ಸೌಲಭ್ಯಗಳನ್ನು ವಿತರಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಮುಖಾಂತರ ಕಾರ್ಮಿಕರು ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಕಾರ್ಯದರ್ಶಿ ಎಂ.ಎಸ್.ಜಾನಕಿ, ಸದಸ್ಯರಾದ ಎ.ಶ್ರೀಧರ್, ಸಲೀಂ, ಶ್ರೀನಿವಾಸ್, ಆರ್.ಮಂಜಯ್ಯ, ಕಾರ್ಮಿಕರಾದ ಸುಶೀಲಮ್ಮ, ಗೌರಮ್ಮ, ಚಂದ್ರಚಾರ್, ಮಂಜಯ್ಯ, ಎ.ಪಿ.ಚಂದ್ರಶೇಖರ್, ಮಂಜುಳಾ ಮತ್ತಿತರರು ಹಾಜರಿದ್ದರು.