ಕೋವಿಡ್ ಕ್ವಾರಂಟೈನ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಯೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದ ಡ್ರೋಣ್ ಪ್ರತಾಪ್ ಅವರಿಗೆ ಡಾ.ಪ್ರಯಾಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಪಶು ವೈದ್ಯರಾಗಿರುವ ಡಾ.ಪ್ರಯಾಗ್ ಅವರು ಕೋವಿಡ್ ಸಮಯದಲ್ಲಿ ಬಿಬಿಎಂಪಿಯಲ್ಲಿ ನೋಡಲ್ ಅಧಿಕಾರಿಯಾಗಿದ್ದರು. ಕ್ವಾರಂಟೈನ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಪ್ರತಾಪ್ ಆರೋಪಿಸಿದ್ದರು.
ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿರುವ ಡಾ.ಪ್ರಯಾಗ್, ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿದ್ದಲ್ಲದೇ, ಮಾನಹಾನಿ ಆಗುವಂತ ಮಾತುಗಳನ್ನು ಆಡಿರುವ ಡ್ರೋಣ್ ಪ್ರತಾಪ್ ಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಪ್ರತಾಪ್ ಬಿಗ್ ಬಾಸ್ ವೇದಿಕೆಯಲ್ಲಿಯೇ ಕ್ಷಮೆಯಾಚನೆ ಮಾಡಬೇಕು. ಲಿಖಿತ ರೂಪದಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ವಕೀಲರ ಮೂಲಕ ಡಾ.ಪ್ರಯಾಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತ ರೂಪದಲ್ಲಿ ಕ್ಷಮೆಯಾಚನೆ ಮಾಡದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ತನ್ನ ಕ್ವಾರಂಟೈನ್ ಬಗ್ಗೆ ಮಾತನಾಡುತ್ತಾ ಡ್ರೋಣ್ ಪ್ರತಾಪ್, ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆಗೆ ಹೊಡೆದು ಕಿರುಕುಳ ನೀಡಿದ್ದರು. ಹೋಟೆಲ್ನಿಂದ ಕೆಳಗೆ ಬಂದಮೇಲೆ ನನಗೆ ಏನೇನು ಮಾಡಿದ್ದರು ಅದನ್ನ ಸ್ವಲ್ಪ ಹೇಳಿದೆ. ಆದರೆ ಇವ್ನು ಸುಳ್ಳು ಹೇಳ್ತಾನೆ. ಇವ್ನು ಹೇಳೋದೇ ಸುಳ್ಳು.. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್ನಲ್ಲಿ ಮಾನಸಿಕ ಹಿಂಸೆ ಕೊಟ್ರು, ಹುಚ್ಚ ಅಂತಾ ಪೇಪರ್ ಗೆ ಸಹಿಹಾಕು ಅಂತಾ ಹೇಳಿದ್ರು ಎಂದು ಡ್ರೋಣ್ ಪ್ರತಾಪ್ ಆರೋಪ ಮಾಡಿದ್ದರು.