ಜಾಂಡೀಸ್ ಕಾಯಿಲೆಗೆ ತುತ್ತಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಎ.ಎಸ್. ರಮ್ಯಾ (18 ವರ್ಷ) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಮೂಡಿಗೆರೆ ತಾಲ್ಲೂಕಿನ ಅಣಜೂರು ಗ್ರಾಮದ ರಮ್ಯಾ ಈಗ್ಗೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರ ಬಳಿ ಪರೀಕ್ಷೆಗೆ ಹೋದಾಗ ಅವರಿಗೆ ಜಾಂಡೀಸ್ ಖಾಯಿಲೆ ಇರುವುದು ಪತ್ತೆಯಾಗಿತ್ತು ಮತ್ತು ಅದು ಅಂತಿಮ ಹಂತಕ್ಕೆ ತಲುಪಿ ಲಿವರ್ ಮತ್ತು ಕಿಡ್ನಿಗೆ ತೀವ್ರ ಹಾನಿಯಾಗಿರುವುದು ಕಂಡು ಬಂದಿತ್ತು. ಜಾಂಡೀಸ್ ಅತಿಯಾಗಿ ರಮ್ಯಾ ಬಹುಅಂಗಾಂಗ ತೊಂದರೆಗೆ ಈಡಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಒಂದು ವಾರದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅಣಜೂರು ಗ್ರಾಮದ ರೈತ ಸತೀಶ್ ಮತ್ತು ಶ್ರೀಮತಿ ಜಯಂತಿ ಅವರ ತೃತೀಯ ಪುತ್ರಿಯಾಗಿದ್ದ ರಮ್ಯಾ ಮೂಡಿಗೆರೆ ಡಿ.ಎಸ್.ಬಿ.ಜಿ. ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ವ್ಯಾಸಾಂಗ ಮಾಡುತ್ತಿದ್ದರು. ಕಳೆದ 15 ದಿನಗಳವರೆಗೆ ಆರೋಗ್ಯದಿಂದ ಲವಲವಿಕೆಯಿಂದಲೇ ಇದ್ದ ರಮ್ಯಾ ಜ್ವರದಿಂದ ಬಳಲಿ ಮೂರ್ನಾಲ್ಕು ದಿನ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ನಂತರ ಅವರು ಜಾಂಡೀಸ್ ಖಾಯಿಲೆಗೆ ತುತ್ತಾಗಿರುವುದು ಪತ್ತೆಯಾಗಿತ್ತು.
ರಮ್ಯಾ ಬದುಕಿ ಬರಲಿ ಎಂದು ಲಕ್ಷಾಂತರ ಮಂದಿ ಪ್ರಾರ್ಥಿಸಿದ್ದರು. ಅವರ ಚಿಕಿತ್ಸೆಗೆ ಅನೇಕ ಮಂದಿ ಆರ್ಥಿಕ ನೆರವನ್ನು ಸಹ ನೀಡಿದ್ದರು. ಆದರೆ ಬಹುಅಂಗಾಂಗಗಳು ಕಾರ್ಯಚಟುವಟಿಕೆ ನಿಲ್ಲಿಸಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ರಮ್ಯಾ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
ಅತ್ಯಂತ ಪ್ರತಿಭಾನ್ವಿತೆಯಾಗಿದ್ದ ರಮ್ಯಾ ತನ್ನ ಉತ್ತಮ ನಡತೆಯಿಂದ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಪ್ರೀತಿಯಿಂದ ಸಾಕಿ ಸಲಹಿದ್ದ ಮುದ್ದಿನ ಮಗಳನ್ನು ಕಳೆದುಕೊಂಡ ಪೋಷಕರು, ಮುದ್ದಿನ ತಂಗಿಯನ್ನು ಕಳೆದುಕೊಂಡ ಇಬ್ಬರು ಸಹೋದರಿಯರು ದಿಕ್ಕುತೋಚದಂತಾಗಿದ್ದಾರೆ. ಅಪಾರ ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ರಮ್ಯಾ ಸಾವಿಗೆ ತೀವ್ರ ಕಂಬನಿ ಮಿಡಿದಿದ್ದಾರೆ.
ಅವರ ಅಂತಿಮ ಸಂಸ್ಕಾರ ನಾಳೆ ಮಂಗಳವಾರ ಮಧ್ಯಾಹ್ನ ಅಣಜೂರು ಗ್ರಾಮದದಲ್ಲಿ ನೆರವೇರಲಿದೆ.