ಸುಗ್ಗಿಕಾಲದಲ್ಲಿ ಆಚರಿಸುವ ಹೆಚ್ಚಿನ ಹಬ್ಬವನ್ನು ಮಲೆನಾಡಿನಾದ್ಯಂತ ಆಚರಿಸಲಾಗುತ್ತಿದೆ. ಇಂದು ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಯು. ಹೊಸಳ್ಳಿ ಗ್ರಾಮದಲ್ಲಿ ಹೆಚ್ಚಿನ ಹಬ್ಬವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.
ಯು.ಹೊಸಳ್ಳಿ, ಮೇಕನಗದ್ದೆ, ಹೊನ್ನೇಕೂಲು ಗ್ರಾಮದ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ ಗ್ರಾಮಸ್ಥರು ದೇವರ ಉತ್ಸವವನ್ನು ನೆರವೇರಿಸಿದರು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
ಬ್ರಹ್ಮಲಿಂಗೇಶ್ವರ ಗುಡಿಯ ಆವರಣದಲ್ಲಿ ಬ್ರಹ್ಮಲಿಂಗೇಶ್ವರ, ಗುಡ್ಡದ ಭೈರವೇಶ್ವರ ಮತ್ತು ಶ್ರೀ ಕುಮಾರಸ್ವಾಮಿ ದೇವರುಗಳು ಸಂಗಮವಾಗಿ ನಂತರ ಕಾಡು ಕುಮಾರ ಗುಡಿಗೆ ತೆರಳಿ ಹೊಸಕ್ಕಿ ನೈವೇದ್ಯ ಅರ್ಪಿಸಲಾಯಿತು. ಅಗ್ನಿಕುಂಡಕ್ಕೆ ಅಗ್ನಿಸ್ಪರ್ಶ ಮಾಡಿ ಕೆಂಡೋತ್ಸವ ಆಚರಿಸಲಾಯಿತು. ಸಂಜೆ ಹೊಳೆಗೆ ಹೋಗುವುದು, ಪ್ರಸಾದ ವಿನಿಯೋಗ, ಹರಕೆ ಅರ್ಪಣೆ, ಕುಮಾರಸ್ವಾಮಿಯವರಿಗೆ ಉಯ್ಯಾಲೆ ಉತ್ಸವ ನೆರವೇರಿಸಿ ನಂತರ ದೇವರ ಉತ್ಸವ ಮೂರ್ತಿಗಳನ್ನು ಬೀಳ್ಗೊಡಲಾಯಿತು.
ಈ ಎಲ್ಲಾ ಕಾರ್ಯಗಳಲ್ಲಿ ಗ್ರಾಮದ ಜನರು, ದೇವಸ್ಥಾನ ಸಮಿತಿಯ ಅಧ್ಯಕ್ಷರು ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು, ಬಂಧುಗಳು ಸಂಭ್ರಮದಿಂದ ಭಾಗವಹಿಸಿದ್ದರು.