ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ದೇವನಗೂಲ್ ಗ್ರಾಮದ ಸತೀಶ್ ಆಚಾರ್, ಬೆಳ್ಳಾಚಾರ್, ನಾಗೇಶ್ ಆಚಾರ್, ನಟೇಶ್ ಆಚಾರ್, ಹರೀಶ್ ಆಚಾರ್, ಪ್ರಶಾಂತ್ ಆಚಾರ್ ಅವರ ತೋಟದಲ್ಲಿ ಅಡಿಕೆ, ಬಾಳೆ ಬೆಳೆಗಳನ್ನು ಕಾಡಾನೆಗಳು ನಾಶಮಾಡಿದೆ.
ಪ್ರಶಾಂತ್ ಆಚಾರ್ ಅವರ ಮನೆಯ ಹಿಂಭಾಗ ಮನೆಯ ಮೇಲ್ಛಾವಣಿ ಜಖಂಗೊಂಡಿದೆ.
ಸ್ಥಳಕ್ಕೆ ಅರಣ್ಯ ಗಸ್ತು ಅಧಿಕಾರಿ ಪರಮೇಶ್ ಮತ್ತಿತರ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ಕಾಡಾನೆಗಳು ಮಲಯ ಮಾರುತ ಅತಿಥಿ ಗೃಹದ ಕಡೆಯಿಂದ ದೇವನಗೂಲ್ ಗ್ರಾಮದ ಕಡೆಗೆ ಸಾಗಿದ್ದು ಪಟಾಕಿ ಸಿಡಿಸಿ ಮೂರು ಕಾಡಾನೆಗಳನ್ನು ಕಾಡಿಗಟ್ಟಿದ್ದರೂ ಮತ್ತೆ ದೇವನಗೂಲ್ ಗ್ರಾಮದತ್ತ ಮುಖ ಮಾಡುತ್ತಿವೆ.
ಕಾಡಾನೆ ಹಾವಳಿಯಿಂದ ಈ ಭಾಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರ ನೋವು ಅರಣ್ಯ ರೋಧನವಾಗಿದೆ.