ಸಕಲೇಶಪುರ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ದಸರಾ ಆನೆ ಆರ್ಜುನ ಆನೆ ಸಾವಿನ ಬಗ್ಗೆ ಆನೆಯ ಮಾವುತ ಮಾತನಾಡಿರುವ ಸ್ಟೋಟಕ ಆಡಿಯೋ ವೈರಲ್ ಆಗಿದೆ.
ಮಾನವಹಕ್ಕು ಕಾರ್ಯಕರ್ತರೊಬ್ಬರ ಜೊತೆ ಅರ್ಜುನ ಆನೆಯ ಮಾವುತ ಮಾತನಾಡಿದ್ದರೆನ್ನಲಾದ ಆಡಿಯೋ ತುಣುಕೊಂದು ಇದೀಗ ವೈರಲ್ ಆಗಿದ್ದು ಪ್ರಕರಣದ ಬಗ್ಗೆ ಸ್ಟೋಟಕ ತಿರುವು ನೀಡಿದೆ.
ಮಾವುತ ಆಡಿಯೋದಲ್ಲಿ ಮಾತನಾಡಿರುವಂತೆ ಅರ್ಜುನ ಆನೆಗೆ ಮದಬಂದಿದ್ದು ಅದನ್ನು ಕಾರ್ಯಾಚರಣೆಗೆ ಕರೆದೊಯ್ಯಬೇಡಿ ಎಂದು ಅರವಳಿಕೆ ತಜ್ಞ ಪಶುವೈದ್ಯ ರಮೇಶ್ ಅವರಿಗೆ ಹೇಳಿದ್ದರೂ ಸಹ ಅವರು ಅದನ್ನು ನಿರ್ಲಕ್ಷಿಸಿ ಅರ್ಜುನ ಆನೆಯನ್ನು ಕಾರ್ಯಾಚರಣೆಗೆ ಕರೆದೊಯ್ಯುವಂತೆ ಒತ್ತಡ ಹಾಕಿದರು.
ಕಾರ್ಯಾಚರಣೆ ವೇಳೆ ಅಚಾನಕ್ಕಾಗಿ ಎದುರಾದ ಮದವೇರಿದ ಕಾಡಾನೆ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗಿತ್ತು. ಆಗ ಆ ಆನೆಗೆ ಅರವಳಿಕೆ ಚುಚ್ಚುಮದ್ದು ಹೊಡೆಯುವಾಗ ಅದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪ್ರಶಾಂತ್ ಎಂಬ ಸಾಕಾನೆಗೆ ತಗುಲಿತ್ತು. ಆಗ ಪ್ರಶಾಂತ್ ಆನೆ ನೆಲಕ್ಕೆ ಬಿದ್ದಿತ್ತು.
ನಂತರ ಪ್ರಶಾಂತ್ ಆನೆ ರಕ್ಷಣೆಗಾಗಿ ಅರ್ಜುನ ಆನೆಯನ್ನು ಅಲ್ಲಿಯೇ ಇರಿಸಲಾಯಿತು. ಆಗ ಕಾಡಾನೆ ಅರ್ಜುನನೊಂದಿಗೆ ಕಾಡಾಟಕ್ಕೆ ಬಂದಿತು. ಆಗ ಅರಣ್ಯ ಸಿಬ್ಬಂದಿಯೊಬ್ಬರು ಬಂದೂಕಿನಿಂದ ಕಾಡಾನೆಗೆಂದು ಹೊಡೆದ ಗುಂಡು ಅರ್ಜುನ ಆನೆಯ ಕಾಲಿಗೆ ತಗುಲಿತು. ಇದರಿಂದ ಅರ್ಜುನ ಆನೆ ಕುಂಟುತ್ತಲೇ ಕಾಡಾನೆಯೊಂದಿಗೆ ಕಾದಾಟಕ್ಕೆ ಇಳಿಯಬೇಕಾಯಿತು. ಇದರಿಂದ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿ ಗಾಯಗೊಳಿಸಿ ಸಾಯಿಸಿದೆ ಎಂದಿದ್ದಾರೆ.
ಅರ್ಜುನ ಆನೆಯನ್ನು ಕೈಯಾರೆ ಸಾಯಿಸಿದ್ದಾರೆ. ಈ ಡಾಕ್ಟರ್ ಗೆ ತಕ್ಕ ಶಿಕ್ಷೆ ಆಗಲೇ ಬೇಕು. ನನ್ನ ಕೆಲಸ ಹೋದರೂ ಪರವಾಗಿಲ್ಲ ಅವರಿಗೆ ಶಿಕ್ಷೆ ಆಗಲೇಬೇಕು. ಇನ್ನು ಮುಂದೆ ಆನೆ ಕಾರ್ಯಾಚರಣೆಗೆ ಅವರು ಭಾಗವಹಿಸಬಾರದು ಹಾಗೇ ಆಗಬೇಕು ಎಂದು ಮಾವುತ ಕಣ್ಣೀರು ಹಾಕುತ್ತಾ ಆಡಿಯೋದಲ್ಲಿ ಮಾತನಾಡಿದ್ದಾರೆ.
ಇದೀಗ ಈ ಆಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ಸಹ ಅರ್ಜುನ ಆನೆಯನ್ನು ಕಾರ್ಯಾಚರಣೆಗೆ ಇಳಿಸಿದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.