ಕಾಳುಮೆಣಸು ಬೆಳೆ ಈಗ ಮಲೆನಾಡಿನ ಬಹುಮುಖ್ಯ ಬೆಳೆಯಾಗಿದೆ. ರೈತರ ಆರ್ಥಿಕ ಅಭಿವೃದ್ಧಿಗೆ ಕಾಳುಮೆಣಸು ಹೆಚ್ಚಿನ ಕೊಡುಗೆ ನೀಡುತ್ತಿದೆ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಪ್ರಮುಖವಾಗಿ ಕಾಳುಮೆಣಸನ್ನು ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಕಾಳುಮೆಣಸು ಬೆಳೆ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ರೈತರಿಗೆ ಹೆಚ್ಚಿನ ಮಾಹಿತಿ ಮತ್ತು ತರಬೇತಿ ಅಗತ್ಯವಿದೆ ಎಂದು ಕಾಫಿ-ಕಾಳುಮೆಣಸು ಬೆಳೆಗಾರ, ಮೂಡಿಗೆರೆ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ಎಂ. ಲಕ್ಷ್ಮಣಗೌಡ ಹೇಳಿದ್ದಾರೆ.
ಅವರು ಶುಕ್ರವಾರ ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾಂಬಾರ ಮಂಡಳಿ ಮೂಡಿಗೆರೆ ಕೇಂದ್ರದಿಂದ ಕಾಳುಮೆಣಸು ಬೆಳೆಗಾರರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾಳುಮೆಣಸು ಬಹುಸೂಕ್ಷ್ಮವಾದ ಬೆಳೆಯಾಗಿದ್ದು, ರೋಗ ಮತ್ತು ಕೀಟಬಾಧೆಯಿಂದ ರಕ್ಷಿಸಿಕೊಳ್ಳಲು ರೈತರು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಇಲಾಖೆಗಳಿಂದ ಸಾಕಷ್ಟು ಮಾಹಿತಿ ನೀಡಲಾಗುತ್ತಿದೆ. ಇದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ತಲುಪಬೇಕು. ಗುಣಮಟ್ಟದ ಕಾಳುಮೆಣಸು ಉತ್ಪಾದನೆಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ರೈತರು ತಮ್ಮ ಉತ್ತಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ದೊಡ್ಡಮಾಗರವಳ್ಳಿ ಗ್ರಾ.ಪಂ. ಅಧ್ಯಕ್ಷೆ ಎಂ. ಪದ್ಮಾವತಿ ಉದ್ಘಾಟಿಸಿ ಸಾಂಬಾರ ಮಂಡಳಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಜೊತೆಗೆ ರೈತರು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ, ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳಿಗೆ ಸಹಾಯಧನ ನೀಡುತ್ತಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಭೂಮಿಕ, ಡಾ. ಪಲ್ಲವಿನಾಥ್, ಆಲ್ದೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ತೇಜಸ್ವಿನಿ ಕಾಳುಮೆಣಸು ಬೆಳೆಯ ತಾಂತ್ರಿಕತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಐಪಿಸಿ ಪ್ರಶಸ್ತಿ ವಿಜೇತ ನೂಮನ್ ಆದಿಲ್ ಕಾಳುಮೆಣಸು ಬೆಳೆ ಬಗೆಗಿನ ತಮ್ಮ ಅನುಭವ ಹಂಚಿಕೊಂಡರು. ದೊಡ್ಡಮಾಗರವಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿರುಪತಿ ಎಸ್. ನಾಯಕ್, ಮೂಡಿಗೆರೆ ಸಾಂಬಾರ ಮಂಡಳಿಯ ಅಧಿಕಾರಿಗಳಾದ ಶಶಿಧರನ್, ಜ್ಯೂಲಿಯೇಟ್ ಜಾಯ್ ಉಪಸ್ಥಿತರಿದ್ದರು. ಆಲ್ದೂರು ಭಾಗದ ಸುಮಾರು 50ಕ್ಕೂ ಅಧಿಕ ರೈತರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.