ದ್ವಾಪರಯುಗದ ಮಹಾಭಾರತದಲ್ಲಿ ಅರ್ಜುನ ತನ್ನ ಸೇನಾಪಡೆ ಮತ್ತು ಸಹೋದರರ ರಕ್ಷಣೆಗೆ ಹೇಗೆ ಮುಂದೆ ನಿಂತು ಯುದ್ಧ ಮಾಡಿದ್ದನೋ ಹಾಗೇ ಕಲಿಯುಗದ ಅರ್ಜುನ ಎಂಬ ಆನೆ ತಮ್ಮನ್ನು ಸಲಹುತ್ತಿದ್ದ ಮಾವುತರು ಮತ್ತು ಇತರೆ ಸಹಪಾಠಿ ಕಾಡಾನೆಗಳ ಜೀವ ರಕ್ಷಣೆಗಾಗಿ ತನ್ನ ಪ್ರಾಣವನ್ನೆ ಬಲಿಕೊಟ್ಟಿದೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಜಗದ್ವಿಖ್ಯಾತಿ ಗಳಿಸಿದ್ದ ಅರ್ಜುನ ಆನೆ ಬದುಕು ದುರಂತ ಅಂತ್ಯ ಕಂಡಿದೆ. ಕೆಚ್ಚೆದೆಯ ಗಜರಾಜ ತನ್ನ ಕೊನೆಯ ಉಸಿರು ಇರುವವರೆಗೆ ಹೋರಾಟ ಮಾಡಿ ವೀರಮರಣವನ್ನಪ್ಪಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಭಾಗದ ಬಾಳೆಕೆರೆ ಕಾಡಿನಲ್ಲಿ ಕಾಡಾನೆಯನ್ನು ಸರೆಹಿಡಿಯುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಮಾವುತನ ಪ್ರಾಣ ರಕ್ಷಣೆಗಾಗಿ ಒಬ್ಬಂಟಿಯಾಗಿ ಕಾದಾಟಕ್ಕಿಳಿದ ಅರ್ಜುನ ಆನೆ ಎಲ್ಲರ ಪ್ರಾಣವನ್ನು ರಕ್ಷಿಸಿ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ.
ಕಾಡಾನೆ ಕಾರ್ಯಾಚರಣೆ ವೇಳೆ ಸಾಕಾನೆ ಅರ್ಜುನನ್ನು ಕಾಡಾನೆ ಸಾಯಿಸಿದೆ. ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡುವ ಹಿನ್ನೆಲೆಯಲ್ಲಿ ಕಾಡಿನಲ್ಲಿ ಆನೆಗಳ ಕಾರ್ಯಾಚರಣೆ ಮಾಡುವ ವೇಳೆ ಅರ್ಜುನ ಆನೆಯ ನೇತೃತ್ವದಲ್ಲಿ ಕೆಲವು ಆನೆಗಳನ್ನು ಅರಣ್ಯದೊಳಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯ ಮೇಲಿದ್ದ ಮಾವುತರು ಎಲ್ಲರೂ ಕಾಡಿನಲ್ಲಿದ್ದ ಒಂಟಿ ಸಲಗವನ್ನು ಸೆರೆ ಹಿಡಿದು ಅದಕ್ಕೆ ರೆಡಿಯೋ ಕಾಲರ್ ಅಳವಡಿಸಲು ಮುಂದಾಗಿದ್ದರು. ಅರವಳಿಕೆ ಚುಚ್ಚುಮದ್ದು ನೀಡುವ ವೇಳೆ ಒಂಟಿ ಸಲಗ ಎಲ್ಲರ ಮೇಲೆ ದಾಳಿ ಮಾಡಲು ಮುಂದಾಗುತ್ತದೆ.
ಅಲ್ಲಿದ್ದ ಸಾಕಾನೆಗಳ ಮೇಲೆ ದಾಳಿ ಆರಂಭಿಸಿದಾಗ ಇತರೆ ಸಾಕಾನೆಗಳು ಹೆದರಿ ಅಲ್ಲಿಂದ ಕಾಲ್ಕೀಳುತ್ತವೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಯ ಮೇಲಿದ್ದ ಮಾವುತರ ಪ್ರಾಣಕ್ಕೂ ಸಂಚಕಾರ ಎದುರಾಗಿರುತ್ತದೆ. ಅರ್ಜುನ ಆನೆಯ ಮೇಲಿದ್ದ ಮಾವುತ ಸೇರಿದಂತೆ ಎಲ್ಲರೂ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಅರ್ಜುನ ಮಾತ್ರ ಜಾಗದಿಂದ ಕದಲದೇ ಕಾಡಾನೆಯೊಂದಿಗೆ ಕಾದಾಟಲಕ್ಕೆ ಇಳಿಯುತ್ತದೆ. ಬಹಳ ಸಮಯದ ವರೆಗೆ ಕಾಡಾನೆಯೊಂದಿಗೆ ಹೋರಾಟ ನಡೆಸುತ್ತದೆ. ಆದರೆ ಬಹಳ ಬಲಿಷ್ಠವಾಗಿದ್ದ ಕಾಡಿನ ಒಂಟಿ ಸಲಗ ಅರ್ಜುನನಿಗೆ ಹೊಟ್ಟೆ ಮತ್ತು ಎದೆಯ ಭಾಗ, ಸೊಂಡಿಲಿನ ಭಾಗಕ್ಕೆ ಬಲವಾಗಿ ತಮ್ಮ ಕೊಂಬಿನಿಂದ ಗಾಯಗೊಳಿಸುತ್ತದೆ.
ತುಂಬಾ ಸಮಯದವರೆಗೆ ಕಾದಾಡಿದ ಅರ್ಜುನ ಕುಸಿದು ಬಿದ್ದಿದೆ. ಇದಾದ ನಂತರವೂ ಕಾಡಾನೆ ಅಲ್ಲಿಯೇ ನಿಂತುಕೊಂಡು ಸಿಬ್ಬಂದಿಯ ಬಲಿಗೆ ಕಾದಿತ್ತು. ಆದರೆ, ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಅಲ್ಲಿಂದ ಓಡಿಸಿದ್ದಾರೆ. ನಂತರ, ಅರ್ಜುನ ಆನೆಯ ಬಳಿ ಹೋಗಿ ನೋಡಿದಾಗ ತೀವ್ರ ಘಾಸಿಗೊಳಗಾದ ಅರ್ಜುನ ವೀರ ಮರಣ ಹೊಂದಿರುವುದು ಕಂಡುಬಂದಿದೆ.
ಅರ್ಜುನನ್ನು ಬಿಗಿದಪ್ಪಿ ಕುಸಿದು ಬಿದ್ದ ಮಾವುತ
ಅರ್ಜುನ ಮಾವುತನ ಪ್ರೀತಿಯ ಆನೆಯಾಗಿತ್ತು. ಎಂದಿಗೂ ಉದ್ಧಟತನ ಮಾಡದ ಅರ್ಜುನ ಕಾದಾಟದ ಕಲಿಯಾಗಿದ್ದನು. ಆದರೆ, ಇಂದು ಕಾಡಾನೆ ಕಾರ್ಯಾಚರನೆಯಲ್ಲಿ ಅರ್ಜುನನ ಮೃತಪಟ್ಟಿದ್ದರಿಂದ ಆನೆಯ ಮಾವುತ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಪ್ರತಿನಿತ್ಯ ತನ್ನನ್ನು ಮನೆಯವರಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಆನೆ ಅರ್ಜುನನ ಸಾವಿನ ನಂತರ ಆನೆಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ನೀನಿಲ್ಲದೇ ನಾನು ಅನಾಥನಾಗಿದ್ದೇನೆ, ಇನ್ಯಾರು ನನಗೆ ಗತಿ ಎಂದು ಬಿಕ್ಕಳಿಸಿದ್ದಾನೆ. ಇನ್ನು ಆನೆ ಸಾವಿನ ದುಃಖವನ್ನು ತಡೆದುಕೊಳ್ಳಲಾಗದೇ ಮಾವುತ ಕೂಡ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಂಬುಲೆನ್ಸ್ ಕರೆಸಿ ಅಲ್ಲಿಂದ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ.
ಒಟ್ಟಾರೆ ಅರ್ಜುನ ಆನೆ ತನ್ನ ಜೀವವನ್ನು ಕಳೆದುಕೊಂಡಿದೆ. ದಶಕಗಳ ಕಾಲ ರಾಜ್ಯ ಜನರೆದುರು ರಾಜಗಾಂಭೀರ್ಯದಿಂದ ಬದುಕಿದ್ದ, ಹೆಸರಿಗೆ ತಕ್ಕಂತೆ ವೀರನಾಗಿದ್ದ ಅರ್ಜುನ ಆನೆ ಅಂತ್ಯ ಈ ರೀತಿ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಅರ್ಜುನನ ಸಾವಿಗೆ ಯಾರು ಕಾರಣ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ಸಾವಿನ ಬಗ್ಗೆ ಮತ್ತು ಕಾರ್ಯಾಚರಣೆ ಬಗ್ಗೆ ಹಲವಾರು ಅನುಮಾನಗಳು, ಪ್ರಶ್ನೆಗಳು ಮೂಡಿವೆ. ಇವೆಲ್ಲಕ್ಕೂ ಸೂಕ್ತ ತನಿಖೆಯಿಂದಷ್ಟೇ ಉತ್ತರ ಸಿಗಬೇಕು.