ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ವಿಚಾರಕ್ಕೆ ವಕೀಲರ ಮೇಲೆ ಪೊಲೀಸರಿಂದ ನಡೆದ ಹಲ್ಲೆ, ಘಟನೆ ಹಿನ್ನೆಲೆಯಲ್ಲಿ ವಕೀಲರು, ಪೊಲೀಸರು ನಡೆಸಿದ ಪ್ರತಿಭಟನೆ ಸೇರಿದಂತೆ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ.
ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಅವರು ಭಾನುವಾರ ಈ ವಿಚಾರ ತಿಳಿಸಿದ್ದಾರೆ. ವಕೀಲ ಪ್ರೀತಂ ಮೇಲೆ ಪೊಲೀಸ್ ಸಿಬ್ಬಂದಿಗಳು ನಡೆಸಿದ್ದ ಹಲ್ಲೆ ವಿಚಾರವು ಎರಡೂ ಕಡೆಯ ಸಂಘರ್ಷಕ್ಕೆ ಕಾರಣವಾಗಿ ಪರಸ್ಪರ ಆಹೋರಾತ್ರಿ ಪ್ರತಿಭಟನೆ, ಮಾತಿನ ಚಕಮಕಿಯಂತಹ ಘಟನೆಗೆ ದಾರಿಮಾಡಿಕೊಟ್ಟಿತ್ತು.
ವಕೀಲರ ಪ್ರತಿಭಟನೆಗೆ ಮಣಿದು ನಗರಠಾಣೆ ಪಿಎಸ್ಐ ಸೇರಿದಂತೆ 6 ಮಂದಿ ಸಿಬ್ಬಂದಿಯನ್ನು ಅಮಾನತು ಪಡಿಸಿ 307 ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿತ ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಅವರ ಕುಟುಂಬಸ್ಥರೊಂದಿಗೆ ಕರ್ತವ್ಯ ನಿರತ ಇತರೆ ಪೊಲೀಸ್ ಸಿಬ್ಬಂದಿಗಳು ಬೀದಿಗಿಳಿದು ಶನಿವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿ ಪೊಲೀಸರನ್ನು ಬಂಧಿಸಬಾರದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಒಂದೆಡೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೊತ್ತಿಕೊಂಡಿದ್ದು ಅಲ್ಲದೆ ಗಂಭೀರ ಆರೋಪದಡಿ ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದ ಹಿನ್ನಲೆಯಲ್ಲಿ ಪೊಲೀಸರನ್ನು ಬಂಧಿಸಲೇ ಬೇಕಾದ ಒತ್ತಡಕ್ಕೆ ಸಿಕ್ಕಿಕೊಂಡಿದ್ದ ಪೊಲೀಸ್ ಇಲಾಖೆ ಭಾನುವಾರ ದಿನವಿಡೀ ಸಭೆ, ಸಮಾಲೋಚನೆಗಳನ್ನು ನಡೆಸಿ ಅಂತಿಮವಾಗಿ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ.
ಎರಡು ದಿನಗಳಿಂದ ನಗರದಲ್ಲೇ ವಾಸ್ತವ್ಯ ಮಾಡಿರುವ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಅವರು ಭಾನುವಾರ ಬೆಳಗ್ಗೆ ನಗರದ ಡಿಎಆರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ ಪ್ರತಿಭಟನೆ ನಡೆಸಿದ ಪೊಲೀಸರಿಗೆ ಇಲಾಖೆ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ನೀಡಿದರು.
ಈ ನಡುವೆ ಕರ್ತವ್ಯಕ್ಕೆ ಅಡ್ಡಿ, ಕಾನೂನು ಬಾಹಿರವಾಗಿ ಗುಂಪುಗೂಡುವುದು, ಕ್ರಿಮಿನಲ್ ಬೆದರಿಕೆ, ಸ್ವಯಂ ಪ್ರೇರಣೆಯಿಂದ ಹಲ್ಲೆ ಮಾಡಿಕೊಳ್ಳುವುದು ಆರೋಪದ ಮೇಲೆ ಚಿಕ್ಕಮಗಳೂರಿನ 10 ಜನ ವಕೀಲರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಪೊಲೀಸರು ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ವಕೀಲರ ವಿರುದ್ಧ ಸುಳ್ಳು ಆರೋಪ ಹೊರಿಸಿ ಎಫ್.ಐ.ಆರ್. ದಾಖಲಿದ್ದಾರೆ ಎಂದು ಆರೋಪಿಸಿದ್ದಾರೆ.