ಕಾಡುಕೋಣ ತಿವಿದು ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಲೋಕವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಲೋಕವಳ್ಳಿ ಗ್ರಾಮದ ಸೋಮಶೆಟ್ಟಿ ಎಂಬುವವರ ಮೇಲೆ ಕಾಡುಕೋಣ ದಾಳಿ ನಡೆಸಿದೆ.
ಬುಧವಾರ ಮುಂಜಾನೆ ಕಾಫಿ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸೋಮಶೆಟ್ಟಿಯವರ ಮೇಲೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ.
ಕಾಡುಕೋಣ ತನ್ನ ಕೊಂಬಿನಿಂದ ಸೋಮಶೆಟ್ಟಿಯವರನ್ನು ತಿವಿದಿದ್ದು, ಅವರ ತೊಡೆ ಮತ್ತು ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ತಕ್ಷಣ ಸೋಮಶೆಟ್ಟಿಯವರು ತಪ್ಪಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುವನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೂಡಿಗೆರೆ ಪಟ್ಟಣಕ್ಕೆ ಸಮೀಪದಲ್ಲಿಯೇ ಈ ಘಟನೆ ನಡೆದಿದೆ. ಲೋಕವಳ್ಳಿ, ಕೆಂಜಿಗೆ, ಬಿದರಹಳ್ಳಿ, ತತ್ಕೊಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡುಕೋಣಗಳ ಹಿಂಡು ಬೀಡುಬಿಟ್ಟಿದ್ದು ರೈತರ ಜಮೀನುಗಳಿಗೆ ತುಂಬಾ ನಷ್ಟವನ್ನು ಉಂಟುಮಾಡುತ್ತಿವೆ.
ಕಾಡುಕೋಣಗಳ ದಾಳಿಯಿಂದ ಜನರು ಭಯಬೀತರಾಗಿದ್ದು, ತೋಟಗಳಿಗೆ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಇದೀಗ ಜನರ ಮೇಲೂ ಕಾಡುಕೋಣ ದಾಳಿ ನಡೆಸಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.