ಮೂಡಿಗೆರೆ ಚಿಕ್ಕಮಗಳೂರು ರಸ್ತೆಯಲ್ಲಿ ಬೂತನಕಾಡು ಸಮೀಪ ಇರುವ ಕುದುರೆಗುಂಡಿ ಕಾಫಿ ಎಸ್ಟೇಟ್ ಬಳಿ ರಸ್ತೆಯಂಚಿನಲ್ಲಿ ದೊಡ್ಡ ಪ್ರಪಾತವಿದ್ದು ಬಲಿಗಾಗಿ ಕಾದು ಕುಳಿತಿರುವಂತಿದೆ.
ಇಲ್ಲಿ ಯಾವುದೇ ತಡೆಗೋಡೆ ಇಲ್ಲದೇ ಇದ್ದು ಅತ್ಯಂತ ಅಪಾಯಕಾರಿಯಾಗಿ ಘೋಚರಿಸುತ್ತಿದೆ. ಈ ರಸ್ತೆ ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯಾಗಿದೆ. ಆದರೆ ಮೂಡಿಗೆರೆಯಿಂದ ಚಿಕ್ಕಮಗಳೂರು ದಂಬದಹಳ್ಳಿಯವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ.ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಕುದುರೆಗುಂಡಿ ಎಸ್ಟೇಟ್ ಬಳಿ ರಸ್ತೆ ಬದಿಯು ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಭಾಗದಲ್ಲಿ ಯಾವುದೇ ತಡೆಗೋಡೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರಪಾತ ರಸ್ತೆಯ ತಿರುವಿನಲ್ಲಿ ಇರುವುದರಿಂದ ಅಪಾಯವನ್ನು ಇನ್ನಷ್ಟು ಹೆಚ್ಚಿಸಿದೆ.
ಹಾಗೆಯೇ ಈ ಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ಅಂಚುಗಳು ನಿರ್ಮಾಣವಾಗಿವೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ರಸ್ತೆಯಂಚಿನಲ್ಲಿ ಹರಿದು ರಸ್ತೆ ಪಕ್ಕದಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಇದರಿಂದಾಗಿ ವಾಹನ ಚಾಲಕರಿಗೆ ತೀವ್ರ ತೊಂದರೆಯಾಗಿದೆ. ಎದುರಿನ ವಾಹನಕ್ಕೆ ಸೈಡ್ ಕೊಡುವಾಗ ರಸ್ತೆಯಂಚಿಗೆ ಚಕ್ರ ಸಿಲುಕಿಕೊಂಡು ಬಹಳಷ್ಟು ತೊಂದರೆಯಾಗುತ್ತಿದೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಗಮನಹರಿಸಿ ದೊಡ್ಡ ಅನಾಹುತ ಸಂಭವಿಸುವ ಮುನ್ನ ಅಪಾಯಕಾರಿ ಪ್ರಪಾತಕ್ಕೆ ತಡೆಗೋಡೆ ನಿರ್ಮಿಸುವುದರ ಜೊತೆಗೆ ಹೊಂಡ ಬಿದ್ದಿರುವ ರಸ್ತೆಯಂಚಿಗೆ ಮಣ್ಣು ಹಾಕಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.