ಸಮಾಜ ಸೇವೆಯ ಮೂಲಕ ಹೆಸರು ಮಾಡುತ್ತಿರುವ ಆರೀಫ್ ಮೊಹಮ್ಮದ್ ಬಣಕಲ್ ಇವರ ಸೇವೆಯನ್ನು ಗುರುತಿಸಿ ಕರುನಾಡು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮಾಜಮುಖಿ ಸೇವಾ ಸಂಘ ಮತ್ತು ಶ್ರೀನಿಧಿ ಫೌಂಡೇಷನ್ ಕರ್ನಾಟಕ ಇವರ ವತಿಯಿಂದ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಧಾರವಾಡದ ರಂಗಾಯಣ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆರೀಫ್ ಅವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದ ಆರೀಫ್ ಅನೇಕ ವರ್ಷಗಳಿಂದ ತಮ್ಮನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಸತಿ ಪ್ರದೇಶಗಳಿಗೆ ಬರುವ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದು, ಅಪಘಾತಗಳು ಸಂಭವಿಸಿದಾಗ ಗಾಯಾಳುಗಳ ಸಹಾಯಕ್ಕೆ ಬರುವುದು, ಅಂಬುಲೆನ್ಸ್ ಮೂಲಕ ತುರ್ತು ಸಂದರ್ಭದಲ್ಲಿ ಸ್ಪಂದಿಸುವುದು, ಚಾರ್ಮಾಡಿ ಘಾಟ್ ನಲ್ಲಿ ಅವಘಡಗಳು ಸಂಭವಿಸಿದಾದ ತಕ್ಷಣ ಸಹಾಯಕ್ಕೆ ನೆರವು ನೀಡುವುದು, ಪೊಲೀಸ್ ಇಲಾಖೆಯೊಂದಿಗೆ ತುರ್ತು ನೆರವಿನ ಸಂದರ್ಭದಲ್ಲಿ ಕೈಜೋಡಿಸುವುದು. ಅಪರಿಚಿತ ಶವಗಳನ್ನು ಶವಾಗಾರಕ್ಕೆ ಸಾಗಿಸುವುದು, ಅನಾಥ ವ್ಯಕ್ತಿಗಳನ್ನು ಆರೈಕೆ ಮಾಡಿ ಆಶ್ರಮಗಳಿಗೆ ಸೇರಿಸುವುದು, ಪಾಕೃತಿಕ ಅವಘಡಗಳು ಸಂಭವಿಸಿದಾಗ ಜನರ ನೆರವಿಗೆ ಬರುವುದು… ಹೀಗೆ ಆರೀಫ್ ಅವರು ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ.
ಕನ್ನಡದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ಆರೀಫ್ ಅವರ ಸೇವೆಯನ್ನು ಗುರುತಿಸಿ ಚಿಕ್ಕಮಗಳೂರು ಜಿಲ್ಲೆಯ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕರುನಾಡು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆರೀಫ್ ಅವರ ಸೇವೆಯನ್ನು ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ.