ಕೆಂಪೇಗೌಡ ಒಕ್ಕಲಿಗರ ವೇದಿಕೆ, ಮೂಡಿಗೆರೆ ತಾಲ್ಲೂಕು ಇವರ ವತಿಯಿಂದ ಕಾಫಿ ಮಂಡಳಿ ನೂತನ ಅಧ್ಯಕ್ಷ ಎಂ.ಜೆ. ದಿನೇಶ್ ದೇವರುಂದ ಮತ್ತು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಗವಿಕಲ್ ಕ್ಲಬ್ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಏಷ್ಯನ್ ಫ್ಯಾರಾ ಓಲಂಪಿಕ್ ಚಿನ್ನದ ಪದಕ ವಿಜೇತೆ ರಕ್ಷಿತಾ ರಾಜು, ರಾಧಾ ವೆಂಕಟೇಶ್ ಮತ್ತು ಅವರ ತರಬೇತುದಾರರನ್ನು ಹಾಗೂ ನೇಪಾಳದಲ್ಲಿ ನಡೆದ ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿದಿಸಿ ಪ್ರಥಮ ಸ್ಥಾನ ಪಡೆದ ಮೂಡಿಗೆರೆ ತಾಲ್ಲೂಕಿನ ಬಕ್ಕಿ ಗ್ರಾಮದ ಹೃತ್ವರಿ ತೋಷ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುತ್ತಿರುವುದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ವಿಶೇಷ ಚೇತನ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ನಮ್ಮ ತಾಲ್ಲೂಕಿಗೆ, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ದೇವರುಂದ ಗ್ರಾಮದ ದಿನೇಶ್ ಅವರನ್ನು ಕಾಫಿ ಮಂಡಳಿ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿರುವುದು ಅತ್ಯಂತ ಸೂಕ್ತ ಆಯ್ಕೆಯಾಗಿದೆ. ದಿನೇಶ್ ಅವರಿಗೆ ಕಾಫಿ ಉದ್ದಿಮೆಯ ಸಂಪೂರ್ಣ ಅರಿವಿದೆ. ಅವರಿಂದ ಕಾಫಿ ಉದ್ದಿಮೆಗೆ ಮತ್ತು ಬೆಳೆಗಾರರಿಗೆ ಒಳ್ಳೆಯ ಸೇವೆ ದೊರಕಲಿ ಎಂದು ಶುಭ ಹಾರೈಸಿದರು.
ಕೆಂಪೇಗೌಡ ಒಕ್ಕಲಿಗ ವೇದಿಕೆ, ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಅಧ್ಯಕ್ಷತೆ ವಹಿಸಿದ್ದರು.
ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪಗೌಡ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್ ಹಂತೂರು, ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲಾವತಿ ರಾಜಣ್ಣ ಕೆಂಬತ್ತಮಕ್ಕಿ, ಕೆಂಪೇಗೌಡ ಒಕ್ಕಲಿಗ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ಪ್ರಸಾದ್ ಬಕ್ಕಿ ಮತ್ತು ವೇದಿಕೆಯ ತಾಲ್ಲೂಕು ಪದಾಧಿಕಾರಿಗಳು, ಹೋಬಳಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.