ಕಾಲೇಜು ಉಪನ್ಯಾಸಕರೋರ್ವರು ಕೋಮುಪ್ರಚೋದನಕಾರಿ ಭಾವನೆ ಬಿತ್ತುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಹಳೇವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಮೂಡಿಗೆರೆ ಡಿ.ಎಸ್.ಬಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನೌಶಾದ್ ಎಂಬುವವರ ವಿರುದ್ಧ ಕಾಲೇಜಿನ ಹಳೇವಿದ್ಯಾರ್ಥಿಗಳು ಈ ಆರೋಪ ಮಾಡಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕರು ಮೂಡಿಗೆರೆಗೆ ಬೇಟಿನೀಡಿದ್ದಾಗ ಸಲ್ಲಿಸಿರುವ ದೂರಿನಲ್ಲಿ ನೌಶಾದ್ ಅವರ ವರ್ತನೆಗಳ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ.
ನೌಶಾದ್ ಅವರು ಸರ್ಕಾರದ ಯೋಜನೆಗಳಾದ ಅಗ್ನಿಪಥ್ ಮತ್ತು ದೇಶದ ಪ್ರಧಾನಿಗಳ ಬಗ್ಗೆ ಮತ್ತು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಭಾವನೆ ಕೆರಳಿಸುವಂತಹ ಪೋಸ್ಟ್ ಗಳನ್ನು ಹಾಕುತ್ತಾರೆ. ತನಗೆ ರಾಜಕೀಯ ನಾಯಕರ ಪ್ರಭಾವವಿದೆ ಎಂದು ಸಹ ಉಪನ್ಯಾಸಕರನ್ನು ಬೆದರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.
ಇವರು ಹಿಂದುಗಳು ಮತ್ತು ರಾಷ್ಟçದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇವುಗಳ ಬಗ್ಗೆ ಸೈಬರ್ ಕ್ರೈಂ ಮೂಲಕ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಇವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಳೇವಿದ್ಯಾರ್ಥಿಗಳು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಂಟಿ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಹಳೇವಿದ್ಯಾರ್ಥಿಗಳಾದ ಸಾಗರ್ ಹುಲ್ಲೇಮನೆ, ಅವಿನಾಶ್ ಜನ್ನಾಪುರ, ಚಿರಾಗ್ ಹರ್ಮಕ್ಕಿ, ಚಿರಾಗ್ ಕೊಟ್ರಕೆರೆ, ಪಟ್ಟಣ ಪಂಚಾಯಿತಿ ಸದಸ್ಯ ಅನುಕುಮಾರ್, ಬಿ.ಜೆ.ಪಿ. ಮುಖಂಡ ದೀಪಕ್ ದೊಡ್ಡಯ್ಯ, ಮೋಹನ್ ಜಾಣಿಗೆ ಮುಂತಾದವರು ಉಪಸ್ಥಿತರಿದ್ದರು.