ಸರ್ಫೇಸಿ ಕಾಯಿದೆ ನೆಪದಲ್ಲಿ ಬೆಳೆಗಾರರ ಆಸ್ತಿ ಹರಾಜು ಹಾಕುತ್ತಿರುವ ಬ್ಯಾಂಕ್ಗಳ ವಿರುದ್ಧ ನ.20ರಂದು ಬೆಳೆಗಾರರ ಸಂಘಟನೆಗಳಿಂದ ಮೂಡಿಗೆರೆ ಪಟ್ಟಣದ ಕೆನರಾ ಬ್ಯಾಂಕ್ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತಿಳಿಸಿದ್ದಾರೆ.
ಅವರು ಗುರುವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 4 ವರ್ಷದಿಂದ ತಾಲೂಕಿನಲ್ಲಿ ಅತಿವೃಷ್ಟಿ, ಈ ವರ್ಷ ಬರಗಾಲದಿಂದ ಕಾಫಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯಿದೆಯಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬಹುತೇಕ ಬ್ಯಾಂಕ್ಗಳು ಬೆಳೆಗಾರರ ಹಿತಕ್ಕಾಗಿ ಓಟಿಎಸ್ ಹಾಗೂ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಒಪ್ಪಿವೆ.
ಆದರೆ ಮಂಗಳೂರಿನ ಕೆನರಾ ಬ್ಯಾಂಕ್ ವಿಭಾಗೀಯ ಮುಖ್ಯಸ್ಥರ ಇದಕ್ಕೆ ಬೆಂಬಲ ಸೂಚಿಸದೇ ಬೆಳೆಗಾರರ ವಿರುದ್ಧ ಸಾಲ ವಸೂಲಾತಿ ಕ್ರಮ ಮುಂದುವರೆಸಲಾಗಿದೆ. ಹಾಗೂ ಸರ್ಫೇಸಿ ಕಾಯ್ದೆಯನ್ನು ಬೆಳೆಗಾರರ ಮೇಲೆ ಹೇರಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದರೂ ಬೆಳೆಗಾರರ ವಿರುದ್ಧ ಕ್ರಮ ವಹಿಸುತ್ತಲೇ ಬರುತ್ತಿದೆ. ಹಾಗಾಗಿ ಅನಿರ್ಧಿಷ್ಟಾವದಿ ಪ್ರತಿಭಟನೆ ಅನಿವಾರ್ಯವಾಗಿದ್ದು, ಕಾಫಿ ಬೆಳೆಯುವ ಪ್ರದೇಶದ ಎಲ್ಲಾ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಯಾವುದೇ ಕೃಷಿ ಸಾಲಕ್ಕೆ ಸರ್ಫೇಸಿ ಕಾಯಿದೆ ಅನ್ವಯವಾಗುವುದಿಲ್ಲ ಕಾಫಿ ಬೆಳೆಯೂ ಒಂದು ಕೃಷಿಯಾಗಿದೆ. ಹೀಗಿದ್ದರೂ ಸರ್ಫೇಸಿ ಕಾಯಿದೆಯಡಿಯಲ್ಲಿ ನೋಟೀಸ್ ಜಾರಿ ಮಾಡಿ ಕಾಫಿ ತೋಟಗಳನ್ನು ಆನ್ ಲೈನ್ ಮೂಲಕ ಹರಾಜು ಹಾಕಲಾಗುತ್ತಿದೆ. ಕೃಷಿ ಸುಸ್ತಿ ಸಾಲಕ್ಕೆ ದಂಡ, ಬಡ್ಡಿ ವಿಧಿಸಬಾರದೆಂದು ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರೂ ಬ್ಯಾಂಕ್ಗಳು ಸುಸ್ತಿ ಬಡ್ಡಿಯನ್ನು ಹಾಕುತ್ತಿವೆ. ಬೆಳೆಗಾರರ ವಿರುದ್ಧ ಪರೋಕ್ಷವಾಗಿ ಬೆದರಿಸುವ ತಂತ್ರ ಬಳಸಲಾಗುತ್ತಿದೆ.
ಕೇರಳ ಮತ್ತು ಮದ್ರಾಸ್ ಸರಕಾರ ಕಾಫಿಯನ್ನು ಕೃಷಿ ಎಂದು ಪರಿಗಣಿಸಿ ಬೆಳೆಗಾರರನ್ನು ಸರ್ಫೇಸಿ ಕಾಯಿದೆಯಿಂದ ಹೊರಗಿಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯಿದೆಯಿಂದ ಹೊರಗಿಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಬಸವರಾಜು, ಕೆಜಿಎಫ್ ಮಾಜಿ ಸಂಘಟನಾ ಕಾರ್ಯದರ್ಶಿ ಎಚ್.ಬಿ.ರೇವಣ್ಣಗೌಡ ಉಪಸ್ಥಿತರಿದ್ದರು.