ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರ ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಸಮೀಪದ ಹುಯಿಗೆರೆಯ ಅಂಡವಾನೆ ಗ್ರಾಮದಲ್ಲಿ ಈ ದರ್ಘಟನೆ ನಡೆದಿದೆ.
ಅಂಡವಾನೆ ಗ್ರಾಮದ ಕೃಷಿ ಮಹಿಳೆ ಸುಜಾತ (54 ವರ್ಷ) ಎಂಬುವವರು ಹಾವುಕಡಿತದಿಂದ ಮೃತಪಟ್ಟವರು.
ಈ ಬಗ್ಗೆ ಸುಜಾತ ಅವರ ಪತಿ ವೆಂಕಟೇಶ್ ಗೌಡ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
ನವೆಂಬರ್ 14 ರ ಸಂಜೆ ತಮ್ಮ ತೋಟದ ಮನೆಯ ಸಮೀಪ ಕಳೆಕೊಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾಗ ಈ ಘಟನೆ ನಡೆದಿದೆ. ಕಳೆತೆಗೆಯುತ್ತಿದ್ದ ಸುಜಾತ ಅವರಿಗೆ ವಿಷದ ಹಾವು ಕಚ್ಚಿತ್ತು. ಅವರಿಗೆ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಗೆ ನೋವು ಗುಣವಾಗಿದೆ ಆರೋಗ್ಯವಾಗಿದ್ದೇನೆ ಎಂದು ಹೇಳಿದ ಮೇರೆಗೆ ಮರುದಿನ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು ಎನ್ನಲಾಗಿದೆ.
ಮನೆಗೆ ಮರಳಿದ್ದ ಸುಜಾತ ಅವರು ನವೆಂಬರ್ 16ರಂದು ಮುಂಜಾನೆ 3 ಗಂಟೆಯ ಹೊತ್ತಿಗೆ ನನಗೆ ಸುಸ್ತಾಗುತ್ತಿದೆ ಎಂದು ಹೇಳಿದ್ದಾರೆ. ಕುಟುಂಬದವರು 108 ಅಂಬುಲೆನ್ಸ್ ಮೂಲಕ ಬಾಳೆಹೊನ್ನೂರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಸುಜಾತ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ವರದಿ : ಸತೀಶ್ ಜೈನ್, ಬಾಳೆಹೊನ್ನೂರು