ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದ ಹಳ್ಳಿ ಗ್ರಾಮದಲ್ಲಿ ಪಟಾಕಿ ಸಿಡಿತಕ್ಕೆ 34 ವರ್ಷದ ಯುವಕ ಪ್ರದೀಪ್ ಎಂಬ ಯುವಕ ಬಲಿಯಾಗಿದ್ದಾನೆ. ಮಂಗಳವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಮತ್ತೋರ್ವ ಯುವಕನಿಗೂ ಗಂಭೀರ ಗಾಯವಾಗಿದ್ದು, ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಮಕ್ಕಳ ಕೈಗೆ ಆಟಂ ಬಾಂಬ್ ಪಟಾಕಿ ಬಾಕ್ಸ್ ಸಿಗಬಾರದು ಅಂತ ಕುರ್ಚಿಯ ಕೆಳಗೆ ಇಟ್ಟು ಅದೇ ಕುರ್ಚಿಯ ಮೇಲೆ ಪ್ರದೀಪ್ ಕುಳಿತ್ತಿದ್ದರು ಎನ್ನಲಾಗಿದೆ. ಮಕ್ಕಳು ಹಾಗೂ ಸ್ನೇಹಿತರ ಜೊತೆ ಆಟವಾಡ್ತಾ ಬೇರೆ ಸಣ್ಣ ಪುಟ್ಟ ಪಟಾಕಿ ಹೊಡೆಯುತ್ತಿದ್ದ ವೇಳೆ ಆ ಪಟಾಕಿಯ ಕಿಡಿ ಆಟಂಬಾಂಬ್ ಬಾಕ್ಸ್ ಮೇಲೆ ಬಿದ್ದು ಆಟಂ ಬಾಂಬ್ ಗಳು ಏಕಾಏಕಿ ಸಿಡಿದು ಖುರ್ಚಿ ಮೇಲೆ ಕುಳಿತ್ತಿದ್ದ ಪ್ರದೀಪ್ ಐದು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದಾರೆ. ಪಟಾಕಿ ಜ್ವಾಲೆ ರಭಸಕ್ಕೆ ನೋಡನೋಡುತ್ತಿದ್ದಂತೆ ಏನಾಗುತ್ತಿದೆ ಅನ್ನುವಷ್ಟರಲ್ಲಿ ಯುವಕ ಪ್ರದೀಪ್ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ. ಪ್ರದೀಪನ ಸೂಕ್ಷ್ಮ ಅಂಗಗಳಿಗೆ ಪಟಾಕಿ ಸಿಡಿತದಿಂದ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ಘಟನೆಯಲ್ಲಿ ತಾತನ ಮನೆಗೆ ದೀಪಾವಳಿ ಆಚರಿಸಲು ಬಂದಿದ್ದ ಮತ್ತೋರ್ವ ಯುವಕ ದರ್ಶನ್ ಕಾಲಿಗೆ ಗಂಭೀರ ಗಾಯವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಸಿಡಿತದ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯವಾಗಿದ್ದು, ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಪಟಾಕಿ ಅನಾಹುತದಿಂದ ಬಾಳಿ ಬದುಕಬೇಕಾಗಿದ್ದ ಯುವಕ ಪ್ರದೀಪ್ ಬಲಿಯಾಗಿದ್ದು ನಿಜಕ್ಕೂ ದುರಂತ..!