ವೈಲ್ಡ್ಕ್ಯಾಟ್-ಸಿ ಸಂಸ್ಥೆ ಚಿಕ್ಕಮಗಳೂರು ಇವರ ವತಿಯಿಂದ ನವೆಂಬರ್ 16 ರಿಂದ 26ರವರೆಗೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನ.16 ರಂದು ಬೆಳಿಗ್ಗೆ 10.30ಕ್ಕೆ ಆಶುಭಾಷಣ ಸ್ಪರ್ಧೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರು ಜಿಲ್ಲಾ ಸುಭಾಶ್ಚಂದ್ರ ಬೋಸ್ ಆಟದ ಮೈದಾನದಲ್ಲಿರುವ ಸ್ಕೌಟ್ ಭವನದಲ್ಲಿ ನಡೆಯಲಿದೆ. ನೀರು, ಗಾಳಿ ಹಾಗೂ ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಮಾತನಾಡಬೇಕಾಗಿದೆ. ಇದೇ ಸಮಯದಲ್ಲಿ ಪ್ರಬಂಧ ಸ್ಪರ್ಧೆ ಪ್ರೌಢಶಾಲೆ, ಪ.ಪೂ. ಕಾಲೇಜು ಮತ್ತು ಪದವಿ ಕಾಲೇಜುಗಳಿಗಾಗಿ ನಡೆಯಲಿದ್ದು, ‘ನಮ್ಮ ನಿಸರ್ಗ ಅವಲಂಬನೆ ನಮ್ಮ ಉಳಿವಿಗಾಗಿ’ ಎಂಬ ವಿಷಯ ನೀಡಲಾಗಿದೆ. ರಸಪ್ರಶ್ನೆ ಸ್ಪರ್ಧೆ ಅಂದು ಮಧ್ಯಾಹ್ನ 2 ಗಂಟೆಯಿಂದ ಸ್ಕೌಟ್ ಭವನದಲ್ಲಿ ಆರಂಭವಾಗಲಿದ್ದು, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ತಂಡ ವನ್ಯಜೀವಿಗಳ ಬಗ್ಗೆ ಈ ಸ್ಪರ್ಧೆಯಲ್ಲಿ ಉತ್ತರಿಸಬೇಕಾಗಿದೆ.
ನ.17 ರಿಂದ 21 ರವರೆಗೆ ಪರಿಸರದ ವಿವಿಧ ಆಯಾಮಗಳನ್ನು ಅರ್ಥ ಮಾಡಿಸಲು ಗ್ರಾಮೀಣ ಪ್ರದೇಶ ಸೇರಿದಂತೆ ನಗರದ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಉಪನ್ಯಾಸಕರಿಗೆ ಮುತ್ತೋಡಿ ಮತ್ತು ಲಕ್ಕವಳ್ಳಿಯಲ್ಲಿ ಒಂದೊಂದು ದಿನದ ಪ್ರಕೃತಿ ಜಾಗೃತಿ ಶಿಬಿರವನ್ನು ಭದ್ರಾ ಅಭಯಾರಣ್ಯದಲ್ಲಿ ಏರ್ಪಡಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದು, ಆಸಕ್ತ ವನ್ಯಜೀವಿ ಛಾಯಾಚಿತ್ರ ಗ್ರಾಹಕರು ನ.21 ರೊಳಗೆ ಎ೪ ಅಳತೆಯ ತಮ್ಮ ಮುದ್ರಿತ ಚಿತ್ರಗಳನ್ನು ನಗರದ ಎಂ.ಜಿ. ರಸ್ತೆಯಲ್ಲಿರುವ ಪ್ಲಾನೆಟ್ ಫ್ಯಾಶನ್ ಝೋನ್ ಅಂಗಡಿಗೆ ಸಲ್ಲಿಸಬೇಕು.
ಪರಿಸರ ಗೀತ ಗಾಯನ ಗೀತೆ ಸ್ಪರ್ಧೆಯನ್ನು ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಕೌಟ್ ಭವನದಲ್ಲಿ ನ.22 ರಂದು ಮಧ್ಯಾಹ್ನ 2 ಗಂಟೆಗೆ ಹಾಗೂ ನ.23 ರಂದು 10 ನಿಮಿಷಗಳ ಕಾಲಾವಧಿಯಲ್ಲಿ ನೀರಿನ ಬಗ್ಗೆ ಕಿರು ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನ.24 ರಂದು ಮಧ್ಯಾಹ್ನ 2 ಗಂಟೆಗೆ ಸ್ಕೌಟ್ ಭವನದಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಣ್ಣಿನಲ್ಲಿ ವನ್ಯಜೀವಿ ಪ್ರತಿಕೃತಿ ರಚನೆ ಸ್ಪರ್ಧೆ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮನುಷ್ಯ ಮುಖದ ಮೇಲೆ ಪ್ರಾಣಿಗಳ ಚಿತ್ರ (ಫೇಸ್ ಪೇಂಟಿಂಗ್) ರಚನಾ ಸ್ಪರ್ಧೆ ಹಾಗೂ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ‘ಮುಳ್ಳಯ್ಯನಗಿರಿ ಸಂರಕ್ಷಣೆ ಅವಶ್ಯಕವೇ?’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆ ನಡೆಯಲಿದೆ.
ನ.25 ರಂದು ‘ಸೈಕಲ್ ತುಳಿ, ಪರಿಸರ ತಿಳಿ’ ಎಂಬ ವಿಷಯಾಧಾರಿತ ಸೈಕಲ್ ಜಾಥಾ ಕಾರ್ಯಕ್ರಮ ಪ್ರೌಢಶಾಲಾ ಮತ್ತು ಪ.ಪೂ. ಕಾಲೇಜುಗಳಿಗೆ ಏರ್ಪಡಿಸಲಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ಜಿಲ್ಲಾ ಆಟದ ಮೈದಾನಕ್ಕೆ ಬೆಳಿಗ್ಗೆ 7 ಗಂಟೆಗೆ ತಮ್ಮ ಸೈಕಲ್ನೊಂದಿಗೆ ಆಗಮಿಸಬೇಕು. ಸ್ಕೌಟ್ ಭವನದಲ್ಲೇ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ರಂಗೋಲಿ ಮೂಲಕ ಪರಿಸರ ಮತ್ತು ವನ್ಯಜೀವಿಗಳನ್ನು ಚಿತ್ರಿಸುವ ಸ್ಪರ್ಧೆ ನ.26 ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.
ಪೂರ್ವ, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪ.ಪೂ.ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ವನ್ಯಜೀವಿ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿದ್ದರೆ, ಚಿತ್ರಕಲಾ ಕಾಲೇಜು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಾರ್ವಜನಿಕರಿಗೆ ಸಿಂಗಳೀಕ ಕಪಿಯ ಚಿತ್ರ ಬರೆಯುವ ಸ್ಪರ್ಧೆ ಸಹ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9448674173 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಭದ್ರಾ ವೈಲ್ಡ್ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಮುಖ್ಯಸ್ಥ ಡಿ.ವಿ.ಗಿರೀಶ್ ತಿಳಿಸಿದ್ದಾರೆ