ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಬಣಕಲ್, ಕೊಟ್ಟಿಗೆಹಾರದಲ್ಲಿ ವಾದ್ಯ ತಂಡದ ಮೂಲಕ ತೆರೆದ ವಾಹನದಲ್ಲಿ ರೋಡ್ ಶೋ ಮಾಡುವ ಮೂಲಕ ಭವ್ಯ ಸ್ವಾಗತ ನೀಡಲಾಯಿತು.
ಬಣಕಲ್, ಕೊಟ್ಟಿಗೆಹಾರದ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ಬಣಕಲ್ ಪ್ರೆಂಡ್ಸ್ ಕ್ಲಬ್, ಕೊಟ್ಟಿಗೆಹಾರ ಗೆಳೆಯರ ಬಳಗ, ಆಟೋ ಚಾಲಕ ಮಾಲಕರ ಸಂಘ , ಅಂಬೇಡ್ಕರ್ ಸಂಘ, ಹಾಗೂ ವಿವಿಧ ಸಂಘಟನೆಗಳಿಂದ ರಕ್ಷಿತಾಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಗ್ರಾಮಸ್ಥರಾದ ಸಂಜಯಗೌಡ ಮಾತನಾಡಿ ಕುಗ್ರಾಮದಲ್ಲಿ ಜನಿಸಿದ ರಕ್ಷಿತಾ ಇಂತಹ ಸಾಧನೆ ಮಾಡಿರುವುದು ಎಲ್ಲರಿಗೂ ಸ್ಪೂರ್ತಿಯಾಗಿದೆ. ರಕ್ಷಿತಾ ಅವರ ಮನೆಗೆ ಹೋಗಲು ರಸ್ತೆ ಸಮಸ್ಯೆ ಇದ್ದು ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಕಸಾಪ ಬಣಕಲ್ ಘಟಕದ ಅಧ್ಯಕ್ಷ ಟಿ.ಎಂ.ಆದರ್ಶ್ ಮಾತನಾಡಿ ದೇಶಕ್ಕೆ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡು ಚಿನ್ನದ ಪದಕ ಪಡೆಯುವ ಮೂಲಕ ಯುವ ಪೀಳಿಗೆಯ ಗಮನ ಸೆಳೆದಿದ್ದಾಳೆ. ಸರ್ಕಾರ ಅವರಿಗೆ ವಿವಿಧ ಸೌಲಭ್ಯ ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿದ ರಕ್ಷಿತಾರಾಜು ಮಾತನಾಡಿ ನನ್ನ ಗೆಲುವಿಗೆ ಅಜ್ಜಿಯ ಪ್ರೋತ್ಸಾಹ, ಕೋಚ್ ರಾಹುಲ್, ಗೈಡ್ ರನ್ನರ್ ತಬರೇಶ್, ಸೌಮ್ಯ ಹಾಗೂ ನನಗೆ ಎಲ್ಲ ಸಹಕಾರ ನೀಡಿದ ಸರ್ವರಿಗೂ ನಾನು ಅಭಾರಿಯಾಗಿದ್ದೇನೆ.ಸನ್ಮಾನ ಸ್ವೀಕರಿಸಿ ಮತ್ತಷ್ಟು ಸಾಧನೆ ಮಾಡಲು ನನಗೆ ಪ್ರೇರಣೆಯಾಗಿದೆ ಎಂದರು.
ಮೆರವಣಿಗೆಯಲ್ಲಿ ಬಣಕಲ್ ಗ್ರಾ.ಪಂ ಸದಸ್ಯರು, ಊರಿನ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು, ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು. ಕೊಟ್ಟಿಗೆಹಾರದ ಹಿರಿಯರಾದ ಹಾಜಿ ಟಿ.ಎ ಖಾದರ್, ಏಕಲವ್ಯ ಶಾಲೆಯ ಪ್ರಾಂಶುಪಾಲ ಬಿ ಟಿ.ವೆಂಕಟೇಶ್ ಕೋಚ್ ರಾಹುಲ್ ಬಾಲಕೃಷ್ಣ, ರಕ್ಷಿತಾಳ ಅಜ್ಜಿ ಲಲಿತಮ್ಮ, ಚಿಕ್ಕಪ್ಪ ರವಿ, ಮುಖ್ಯ ಶಿಕ್ಷಕ ಪಿ.ವಾಸುದೇವ್, ಶಿಕ್ಷಕರಾದ ಜಿ.ಎಚ್ ಶ್ರೀನಿವಾಸ್, ಪ್ರವೀಣ್, ಅಕ್ರಂ, ಮುಖಂಡರಾದ ಅರುಣ್ ಪೂಜಾರಿ, ಶಿವರಾಮಶೆಟ್ಟಿ, ಎನ್.ಟಿ.ದಿನೇಶ್, ಸೋಮೇಶ್ ಮರ್ಕಲ್, ಸಂಜಯ್ ಗೌಡ, ಮಧುಕುಮಾರ್, ಬಿ.ಬಿ.ಮಂಜುನಾಥ್, ಎ.ಆರ್.ಅಭಿಲಾಷ್, ಮಹೇಶ್, ಟಿ.ಎಂ.ನರೇಂದ್ರ, ಪ್ರಭಾಕರ್ ಮತ್ತಿತರರು ಇದ್ದರು.