ಬುಧವಾರ ಮೂಡಿಗೆರೆಗೆ ಭೇಟಿ ನೀಡಿದ್ದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಬೆಳೆಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಮನವಿ ಪತ್ರಗಳನ್ನು ನೀಡಿದರು.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾದ ನಿಯೋಗ ಕಾಫಿ ಬೆಳೆಗಾರರಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಸಿದರು.
ಪ್ರಮುಖವಾಗಿ ಬ್ಯಾಂಕುಗಳು ವಿವೇಚನಾರಹಿತವಾಗಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಅಡಿ ನೊಟೀಸ್ ಜಾರಿ ಮಾಡಿ ಕೆಲವೇ ದಿನಗಳಲ್ಲಿ ತೋಟಗಳನ್ನು ಆನ್ ಲೈನ್ ಹರಾಜು ಹಾಕುತ್ತಿರುವುದರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಯಿತು. ಆಗ ಸ್ಥಳದಲ್ಲೇ ಹಾಜರಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಶ್ರೀಮತಿ ಮೀನಾ ನಾಗರಾಜ್ ರವರು ತಾವು ಈ ಕುರಿತು ಈಗಾಗಲೇ ಬೆಳೆಗಾರರು ಹಾಗೂ ಜಿಲ್ಲಾ ಬ್ಯಾಂಕರ್ಸ್ ಸಭೆ ಕರೆದು ಬ್ಯಾಂಕ್ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ “ಬೆಳೆಗಾರರಿಗೆ ಕಿರುಕುಳ ನೀಡದಂತೆ ” ತಿಳಿಸಿರುವುದಾಗಿಯೂ ಹಾಗೂ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಭೆ (SLBC) ನಡೆಯುವ ವರೆಗೂ ಸರ್ಫೇಸಿ ಇ-ಹರಾಜು ಇತ್ಯಾದಿ ಜರುಗಿಸದಂತೆ ಸೂಚಿಸಿರುವುದಾಗಿಯೂ ತಿಳಿಸಿದರು. ಹೀಗಿದ್ದಾಗ್ಯೂ ಕೆನರಾ ಬ್ಯಾಂಕ್ ಮಾತ್ರ ಈ ರೀತಿ ಬೆಳೆಗಾರರಿಗೆ ನೋಟೀಸ್ ಜಾರಿಗೊಳಿಸುವುದನ್ನು ಹಾಗೂ ಹರಾಜು ಸೂಚನೆಯನ್ನು ಪ್ರಕಟಿಸುವುದನ್ನು ಮುಂದುವರೆಸಿದೆ. ತಾವು ಈ ಕುರಿತು ಕೆನರಾ ಬ್ಯಾಂಕ್ ನ ಮಂಗಳೂರಿನ ಕಛೇರಿಗೆ ಈ ಕೂಡಲೇ ಪತ್ರ ಬರೆಯುವುದಾಗಿಯೂ ಹೇಳಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಕ್ರಮವನ್ನು ತತ್ ಕ್ಷಣ ಜಾರಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಾದ ಆದೇಶ ನೀಡಿರುತ್ತಾರೆ.
ಅನಧಿಕೃತ ಸಾಗುವಳಿ ಭೂಮಿಯನ್ನು ಲೀಸ್ ಮೂಲಕ ನೀಡುವ ಪ್ರಕ್ರಿಯೆಗೆ ಆದಷ್ಟು ಶೀಘ್ರವಾಗಿ ಚಾಲನೆ ನೀಡುವಂತೆ ಮತ್ತು ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಕಾಡಾನೆ – ಮಾನವ ಸಂಘರ್ಷ ನಿಯಂತ್ರಣಕ್ಕೆ ಕೂಡಲೇ ಕ್ರಮ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ನಯನಾ ಮೋಟಮ್ಮ, ಟಿ. ಡಿ. ರಾಜೇಗೌಡ, ಹೆಚ್. ಡಿ. ತಮ್ಮಯ್ಯ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಬಿ. ಬಿ ನಿಂಗಯ್ಯ , ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಗಾಯಿತ್ರಿ ಶಾಂತೇಗೌಡ, ಗೃಹ ಮಂಡಳಿ ಮಾಜಿ ಅಧ್ಯಕ್ಷರಾದ ಹಾಲಪ್ಪಗೌಡರು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. ಕೆ.ಜಿ.ಎಫ್ ಮಾಜಿ ಅಧ್ಯಕ್ಷರಾದ ಬಿ.ಎಸ್. ಜಯರಾಂ ರವರು ಹಾಗೂ ಸಂಘದ ಗೌ.ಕಾರ್ಯದರ್ಶಿ ಕೆ. ಡಿ ಮನೋಹರ್ ರವರು ಈ ಸಂದರ್ಭದಲ್ಲಿ ಹಾಜರಿದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಸದರಿ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಡುವಲ್ಲಿ ಸಹಕರಿಸಿದರು ಎಂದು ಬಿ.ಆರ್. ಬಾಲಕೃಷ್ಣ ತಿಳಿಸಿದ್ದಾರೆ.