ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಕೆಎಎಸ್ ಅಧಿಕಾರಿ ಪ್ರತಿಮಾ ಅವರನ್ನು ಅವರ ಕಾರು ಚಾಲಕನೇ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿದ್ದ ಪ್ರತಿಮಾ ಅವರನ್ನು ಶನಿವಾರ ರಾತ್ರಿ ಅವರು ವಾಸವಾಗಿದ್ದ ಮನೆಯಲ್ಲಿಯೆ ಕೊಲೆ ಮಾಡಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಘಟನೆಯ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಕೊಲೆಯ ಆರೋಪಿ ಪ್ರತಿಮಾ ಅವರ ಕಾರು ಚಾಲಕ ಕಿರಣ್ ಎಂಬಾತನನ್ನು ಭಾನುವಾರ ಸಂಜೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಂಧಿಸಿ ಕರೆತರಲಾಗಿತ್ತು. ಆರೋಪಿ ಕೊಲೆ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ. ಕಳೆದ ಎಂಟು ವರ್ಷಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಗುತ್ತಿಗೆ ಮೇರೆಗೆ ಡ್ರೈವರ್ ಆಗಿದ್ದನು. ಕೆಲಸದಲ್ಲಿ ನಿಷ್ಠೆ ಇ ಲ್ಲದ ಕಾರಣ ಇತ್ತೀಚೆಗೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಶನಿವಾರ ಸಂಜೆ ವೇಳೆ ಪ್ರತಿಮಾ ಅವರ ಮನೆ ಬಳಿ ಬಂದಿದ್ದ ಕೊಲೆ ಆರೋಪಿ ಕಿರಣ್, ಪ್ರತಿಮಾ ಅವರು ಮನೆಯ ಒಳಗೆ ಹೋಗುತ್ತಿದ್ದಂತೆ ಅವರ ಹಿಂದೆಯೇ ಮನೆ ಪ್ರವೇಶಿಸಿ ವೇಲ್ನಿಂದ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದಾನೆ.
ಗಣಿ ಇಲಾಖೆ ಡ್ರೈವರ್ ಕೆಲಸ ಕಳೆದುಕೊಂಡಿದ್ದಕ್ಕೆ ಹೆಂಡ್ತಿ ಬಿಟ್ಟು ತವರಿಗೆ ಹೋಗಿದ್ದಳು. ಇದ್ರಿಂದ ಆತ ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದ ಪ್ರತಿಮಾ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಅನ್ನೊ ಮಾಹಿತಿಯಿದೆ. ಮಾತಾಡೋಕೆ ಅಂತಾ ಕೊಲೆಯಾದ ಹಿಂದಿನ ದಿನವೂ ಮನೆ ಬಳಿ ಹೋಗಿದ್ದನು. ಆದರೆ, ಪ್ರತಿಮಾ ಆರೋಪಿ ಕಿರಣ್ನನ್ನು ಮಾತನಾಡಿಸದೇ ನಿರ್ಲಕ್ಷ್ಯ ಮಾಡಿದ್ದರು. ಇನ್ನು ಆಫೀಸ್ ಬಳಿಯೂ ಹೋಗಿ ಒಮ್ಮೆ ಪ್ರತಿಮಾರ ಭೇಟಿಗೆ ಪ್ರಯತ್ನ ಪಟ್ಟಿದ್ದೆ ಎಂದು ಆರೋಪಿ ಕಿರಣ್ ಹೇಳಿದ್ದಾನೆ ಎಂದು ಡಿಸಿಪಿ ರಾಹುಲ್ ಕುಮಾರ್ ಹೇಳಿದ್ದಾರೆ.
ಖಡಕ್ ಅಧಿಕಾರಿಯಾಗಿದ್ದ ಪ್ರತಿಮಾ ಬದುಕು ಧಾರುಣ ಅಂತ್ಯ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಪ್ರತಿಮಾ ಖಡಕ್ ಅಧಿಕಾರಿಯಾಗಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅವರು ಉತ್ತಮ ಹೆಸರು ಮಾಡಿದ್ದರು. ವಿವಾಹಿತರಾಗಿದ್ದ ಅವರಿಗೆ ಒಬ್ಬ ಮಗನಿದ್ದು ಮಗ ತೀರ್ಥಹಳ್ಳಿಯಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ.
ಪ್ರತಿಮಾ ಬೆಂಗಳೂರಿನಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಸಹೋದರ ಸಹ ಬೆಂಗಳೂರಿನಲ್ಲೇ ವಾಸವಾಗಿದ್ದು, ಶನಿವಾರ ರಾತ್ರಿ ಫೋನ್ ಮಾಡಿದಾಗ ಫೋನ್ ರಿಸೀವ್ ಮಾಡಿರಲಿಲ್ಲ. ಮತ್ತೆ ಭಾನುವಾರ ಬೆಳಿಗ್ಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡು ಕೆಳಗಿನ ಮನೆಯವರಿಗೆ ವಿಷಯ ತಿಳಿಸಿ ಪರಿಶೀಲಿಸಲು ಹೇಳಿದಾಗ ಪ್ರತಿಮಾ ಅವರು ಕೊಲೆಯಾಗಿದ್ದು ಬೆಳಕಿಗೆ ಬಂದಿತ್ತು.
ಕೊಲೆ ಮಾಡಿ ಆರೋಪಿ ಕಿರಣ್ ಚಾಮರಾಜನಗರಕ್ಕೆ ಪರಾರಿಯಾಗಿದ್ದ. ಮೊಬೈಲ್ ಲೋಕೆಷನ್ ಆಧರಿಸಿ ಆರೋಪಿ ಪತ್ತೆ ಮಾಡಿದ್ದಾರೆ. ಆರೋಪಿ ಕಿರಣ್ ಚಾಮರಾಜನಗರದ ಮಹಾದೇಶ್ವರ ಬೆಟ್ಟದಲ್ಲಿ ಇರೋ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತ್ರ ಚಾಮರಾಜನಗರ ಪೊಲೀಸರು ಮಹಾದೇಶ್ವರ ಬೆಟ್ಟಕ್ಕೆ ಹೋಗಿ ಕಿರಣ್ ಹಿಡಿದಿದ್ದರು. ಬಳಿಕ ಬೆಂಗಳೂರು ಸುಬ್ರಮಣ್ಯ ಪುರ ಪೊಲೀಸರಿಗೆ ಒಪ್ಪಿಸಿದರು. ಸದ್ಯ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ.
ಇವರ ಕೊಲೆ ಹಿಂದೆ ಗಣಿ ಮಾಫೀಯಾದ ಸಂಚೇನಾದರೂ ಇದೆಯೇ ? ಡ್ರೈವರ್ ನನ್ನು ಬಳಸಿಕೊಂಡು ಬೇರೆಯವರು ಏನಾದರೂ ಪ್ರತಿಮಾ ಕೊಲೆಗೆ ಸ್ಕೆಚ್ ಹಾಕಿದ್ದರೆ ? ಡ್ರೈವರ್ ತನ್ನ ಕೆಲಸ ಕಳೆದುಕೊಂಡ ಸಿಟ್ಟಿನ ಕಾರಣದಿಂದ ಮಾತ್ರ ಕೊಲೆ ಮಾಡಿದ್ದನೆ ? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಷ್ಟೇ.