ರಾಗಿ ಮತ್ತು ಈರುಳ್ಳಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.
ಅವರು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ರೈತರ ಹೊಲಗಳಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಹುಲ್ಲೇಹಳ್ಳಿ ರೈತರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬರಗಾಲದಿಂದಾಗಿ ಕಡೂರು ತಾಲ್ಲೂಕಿನಲ್ಲಿ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಬಿತ್ತನೆ ಮಾಡಿದ್ದ ರಾಗಿ ಮತ್ತು ಈರುಳ್ಳಿ ಬೆಳೆಗಳು ಮಳೆಯಿಲ್ಲದೇ ನಾಶವಾಗಿವೆ. ಇದರಿಂದಾಗಿ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರ ನೆರವಿಗೆ ಬರಬೇಕಾಗಿದೆ. ರೈತರು ಬೆಳೆದಿರುವ ಬೆಳೆ ನಾಶವಾಗಿರುವುದರಿಂದ ತಕ್ಷಣ ರೈತರಿಗೆ ಬರಪರಿಹಾರ ಮೊತ್ತವನ್ನು ಪಾವತಿಸಬೇಕಾಗಿದೆ. ಮತ್ತು ರೈತರು ಬೆಳೆದಿರುವ ರಾಗಿ ಹಾಗೂ ಈರುಳ್ಳಿ ಬೆಳೆಗಳಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಣೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ. ದತ್ತಾ, ಜೆಡಿಎಸ್ ಯುವ ಮುಖಂಡ, ಕಡೂರು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದ ಅಧ್ಯಕ್ಷ ಹರ್ಷಿತ್ ಕಡೂರು, ಮಂಜು ಮಚ್ಚೇರಿ ಸೇರಿದಂತೆ ಸ್ಥಳೀಯ ಜೆ.ಡಿ.ಎಸ್. ಮುಖಂಡರುಗಳು ಉಪಸ್ಥಿತರಿದ್ದರು