ಸೌಜನ್ಯ ಎಂಬುವುದು ದೇವಿ ಶಕ್ತಿ ರೂಪ ಪಡೆದಿದೆ. ಅತ್ಯಾಚಾರಿ ಪರವಾಗಿ ಯಾರು ನಿಲ್ಲುತ್ತಾರೋ ಅವರು ಸೌಜನ್ಯ ದೇವಿಯ ಶಾಪಕ್ಕೆ ತುತ್ತಾಗಬೇಕಾಗುತ್ತದೆ. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೋರಾಟಗಾರ ಮಹೇಶ್ಶೆಟ್ಟಿ ತಿಮರೋಡಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಾಗರೀಕ ಹೋರಾಟ ಒಕ್ಕೂಟದಿಂದ ಏರ್ಪಡಿಸಿದ್ದ ಸೌಜನ್ಯ ಪ್ರಕರಣ ಮರು ತನಿಖೆ ನಡೆಸಲು ಒತ್ತಾಯಿಸಿ ಜನಾಗ್ರಹ ಸಭೆ ಹಾಗೂ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೌಜನ್ಯ ಪ್ರಕರಣ ತನಿಖೆ ನಡೆಸಲು ಸರಕಾರ ದೂರು ನೀಡಬೇಕೆಂದು ಹೇಳುತ್ತಿದೆ. ಇವರಿಗೆ ಸೌಜನ್ಯ ಪ್ರಕರಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಒಂದು ಪ್ರಕರಣ ತನಿಖೆ ನಡೆಸಲು ಎಷ್ಟು ಬಾರಿ ದೂರು ನೀಡಬೇಕೆಂದು ಪ್ರಶ್ನಿಸಿದ ಅವರು, ಅತ್ಯಾಚಾರಿಗಳ ಹಿಂದೆ ಯಾರಿದ್ದಾರೆಂದು ಜಗತ್ ಜಾಹಿರಾಗಿದೆ. ನಮ್ಮ ಮೇಲೆ ಮಾನ ನಷ್ಟ ಪ್ರಕರಣ ಹಾಕುವ ಮೂಲಕ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಆಗುತ್ತಿದೆ. ಆದರೆ ಅದಕ್ಕೆ ನಾವು ಬಗ್ಗುವುದಿಲ್ಲ. ಕರಾವಳಿ, ಚಿಕ್ಕಮಗಳೂರು ಮಾತ್ರವಲ್ಲ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸೌಜನ್ಯದ ಪರ ಹೋರಾಟದ ಕಿಚ್ಚು ಹೆಚ್ಚಿಸುತ್ತೇವೆಂದು ಹೇಳಿದರು.
ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ದುರ್ಘಟನೆಯ ಸತ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಮುಂದೆ ಸತ್ಯ ಒಡೆದು ಹೊರ ಬಂದೇ ಬರುತ್ತದೆ. ದುಷ್ಟರಿಗೆ ಅಣ್ಣಪ್ಪ ಸ್ವಾಮಿ ಮತ್ತು ಶ್ರೀ ಮಂಜುನಾಥ ದೇವರ ಶಾಪ ತಟ್ಟದೇ ಬಿಡುವುದಿಲ್ಲ. 2000ರಿಂದ 2012ವರೆಗೆ ಕೇವಲ 10 ವರ್ಷದಲ್ಲಿ 462 ಕೊಲೆಯಾಗಿವೆ. ಅದರಲ್ಲಿ 96 ಮಹಿಳೆಯರು ಮತ್ತು ಮಕ್ಕಳ ಸಾವಾಗಿದೆ. 4 ವರ್ಷದಲ್ಲಿ 18 ವರ್ಷದ ಒಳಗಿನ 18 ಹೆಣ್ಣು ಮಕ್ಕಳ ಕೊಲೆಯಾಗಿದೆ. ಅದು ಯಾವ ರೀತಿ ಆಗಿದೆ ಎಂದರೆ ಹೇಳತೀರದು. ಕಾನೂನು ರಕ್ಷಣೆ ಮಾಡುವವರಿಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು 12 ವರ್ಷದಿಂದ ಸಾಧ್ಯವಾಗಿಲ್ಲ. ಕಳಸದಲ್ಲಿ ಸೌಜನ್ಯ ಇರುವ ಬ್ಯಾನರ್ನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆಂದರೆ ಇದರ ಅರ್ಥವೇನು? ಓರ್ವ ದೌರ್ಜನ್ಯಕ್ಕೊಳಗಾದ ಮಹಿಳೆ ಸಾವಿಗೆ ಅರ್ಥವಿಲ್ಲವೇ? ನಮ್ಮನ್ನು ಇರುವೆ ಅಂದುಕೊAಡಿದ್ದಾರೆ. . ಆದರೆ ಇರುವೆಗೆ ಆನೆಯನ್ನು ನೆಲಕ್ಕುರುಳಿಸುವ ಶಕ್ತಿ ಇದೆ ಎಂಬುದು ಮರೆತಿದ್ದಾರೆ. ಧರ್ಮ, ಸಮಾಜ ಉಳಿಯಬೇಕಾದರೆ ದುಷ್ಟರಿಗೆ ಅಧಿಕಾರ ನೀಡಬಾರದೆಂದು ಹೇಳಿದರು.
ಪ್ರಗತಿಪರ ಚಿಂತಕಿ ಪ್ರಸನ್ನರವಿ ಮಾತನಾಡಿ, ಸೌಜನ್ಯ ಅತ್ಯಾಚಾರದ ಬಗ್ಗೆ ಶವಪರೀಕ್ಷೆ ನಡೆಸಿದಾಗ ಸಾಮೂಹಿಕ ಅತ್ಯಾಚಾರವೆಂದು ವರದಿ ಬಂದಿದೆ. ನಂತರ ಸಿಸಿಟಿವಿ ತುಳುಕು ಸೇರಿದಂತೆ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸಲಾಗಿದೆ. ನಮ್ಮ ನ್ಯಾಯಾಲಯಕ್ಕೆ ಸಮರ್ಪಕವಾದ ಸಾಕ್ಷಿ ದೊರಕಿಸದೆ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ದೇವರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರಕಾರ ಪ್ರಾಮಾಣಿಕವಾಗಿ ಮರುತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ಮುಂದಾಗಬೇಕು. ಅದಕ್ಕಾಗಿ ನಾವು ಸಂಗ್ರಹಿಸಿರುವ ಪೂರಕ ದಾಖಲೆ ನೀಡಲು ಸಿದ್ದವಿದ್ದೇವೆ. ಸೌಜನ್ಯ ಸಾವು ನೆನಪಿಸಿಕೊಂಡರೆ ಬೆಚ್ಚಿ ಬೀಳುವಂತಾಗುತ್ತದೆ. ಇಂತಹ ಘಟನೆ ಮತ್ತೆ ಎಂದಿಗೂ ಮರುಕಳಿಸಬಾರದು. ಹಾಗಾಗಿ ಎಲ್ಲಾ ಮನೆಯ ತಾಯಂದಿರುವ ತಮ್ಮ ಮನೆಯಲ್ಲಿ ದೇವರಿಗೆ ದೀಪ ಹಚ್ಚುವಾಗ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಲೆಂದು ಪ್ರಾರ್ಥಿಸಬೇಕೆಂದು ಮನವಿ ಮಾಡಿದರು.
ನಾಗರೀಕ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಜನ್ಯ ತಾಯಿ ಕುಸುಮಾವತಿ, ಹೋರಾಟಗಾರ ತಮ್ಮಣ್ಣಶೆಟ್ಟಿ, ಮುಖಂಡರಾದ ಪ್ರಭಾಕರ್ ಬಿನ್ನಡಿ, ಕರವೇ ಜಿಲ್ಲಾಧ್ಯಕ್ಷ ಪ್ರಸನ್ನಗೌಡ, ರೈತ ಮುಖಂಡ ಹಳೆಕೆರೆ ರಘು, ಸಿಪಿಐ ತಾಲೂಕು ಅಧ್ಯಕ್ಷ ರಮೇಶ್ ಕೆಳಗೂರು, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ಗೌಡ, ಚಂದ್ರೇಶ್ ಮಗ್ಗಲಮಕ್ಕಿ, ರಾಮಮೂರ್ತಿಭಟ್ ಕಳಸ, ಒಕ್ಕೂಟದ ಕಾರ್ಯದರ್ಶಿ ಜಗದೀಶ್ ಚಕ್ರವರ್ತಿ ಮತ್ತಿತರರಿದ್ದರು.