ಕನ್ನಡ ಭಾಷೆ ಅಬಿಮಾನವನ್ನು ಕೇವಲ ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ಗುಣಗಾನ ಮಾಡುವುದನ್ನು ಬಿಟ್ಟು ನಮ್ಮ ಮನೆ, ಮನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಬುಧವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ಹಾಗಾಗಿ ಯುವ ಜನತೆಯನ್ನು ಜಾಗೃತಗೊಳಿಸಬೇಕಾಗಿದೆ. ಕನ್ನಡಿಗರಾದ ನಾವು ಮೊದಲು ಕನ್ನಡ ಭಾಷೆಗೆ ಮೊದಲ ಆಧ್ಯತೆ ನೀಡುವ ಜತೆಗೆ ಇತರೇ ಭಾಷೆಯನ್ನೂ ಪ್ರೀತಿಸಬೇಕು. ಕುವೆಂಪು, ಶಿವರಾಂ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಎಂ.ಶೀಕಂಠಯ್ಯ ಸೇರಿದಂತೆ ಅನೇಕ ಕವಿಗಳು ಕನ್ನಡದ ಕಂಪು ಸೂಚಿಸುವ ಮಹಾನ್ ಕಾರ್ಯ ಮಾಡಿದ್ದಾರೆ. ಅವರ ಹೆಸರನ್ನು ನಾವು ಸದಾ ಸ್ಮರಿಸುವ ಜತೆಗೆ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಉಳಿಸಲು ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಉಪ ವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಧ್ವಜಾರೋಹಣವನ್ನು ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೆತ್ರದಲ್ಲಿ ಸೇವೆ ಸಲ್ಲಿಸಿರುವ ಸುನೀಲ್ ಜೆ.ಗೌಡ, ಅಂಬಾವತಿ ಶೆಟ್ಟಿ, ಸನ್ಮತಿ ಹಾರ್ಮಕ್ಕಿ, ಪರಮೇಶ್, ಮೊಹ್ಸಿನ್, ಕೆ.ವಿ.ಮಂಜುನಾಥ್ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಕನ್ನಡ ಭಾಷೆ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ.ಪಂ. ಸದಸ್ಯರಾದ ಎಚ್.ಪಿ.ರಮೇಶ್, ಮನೋಜ್, ಕಸಾಪ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್, ಕಸಬಾ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎಸ್. ನಾಗರಾಜ್, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ರೈತ ಮುಖಂಡ ಡಿ.ಆರ್. ಪುಟ್ಟಸ್ವಾಮಿಗೌಡ, ಸಮಾಜ ಸೇವಕ ಹಸೈನಾರ್, ಕಮಲಾಕ್ಷಮ್ಮ, ಅಣ್ಣೇಗೌಡ, ಬಿ.ಇ.ಓ. ಹೇಮಂತ್ ರಾಜ್, ಶಿರಸ್ತೆದಾರ್ ಕುಮಾರ್, ಕ್ರೀಡಾ ಅಧಿಕಾರಿ ಶ್ರೀನಿವಾಸ್, ವಿ ವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.